ಬೆಂಗಳೂರು: ಸಚಿವ ಜಮೀರ್ ಅಹ್ಮದ್ ಇತ್ತೀಚೆಗಷ್ಟೇ ಕೇಂದ್ರ ಸಚಿವ ಕುಮಾರಸ್ವಾಮಿ ಅವರನ್ನು ಕರಿಯ ಎಂದು ಕರೆದಿದ್ದರು. ಆನಂತರ ವಕ್ಫ್ ವಿಚಾರದಲ್ಲಿ ಹಲವಾರು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದರಿಂದ ಬೇಸತ್ತ ಅವರದೇ ಪಕ್ಷದ ಹಲವು ನಾಯಕರು, ನಾಯಕರಿಗೆ ದೂರು ನೀಡಲು ಮುಂದಾಗಿದ್ದಾರೆ.
ವಕ್ಫ್ ವಿವಾದ ಕುರಿತಾಗಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ನೀಡುತ್ತಿರುವ ವಿವಾದಾತ್ಮಕ ಹೇಳಿಕೆಗಳು ಪಕ್ಷಕ್ಕೆ ಡ್ಯಾಮೇಜ್ ಆಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ದೂರು ನೀಡಲು ಕಾಂಗ್ರೆಸ್ ನಲ್ಲಿರುವ ಮುಸ್ಲಿಂ ನಾಯಕರು ಮುಂದಾಗಿದ್ದಾರೆ.
ಚನ್ನಪಟ್ಟಣ ಚುನಾವಣೆಯಲ್ಲಿ ಭಾಗವಹಿಸಿದ್ದ ಜಮೀರ್, ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ಅವರನ್ನು ಕರಿಯ ಎಂದು ಕರೆದಿದ್ದರು. ಇದು ಜನಾಂಗೀಯ ನಿಂದನೆ ಹೇಳಿಕೆ ಎಂದು ವಿವಾದ ಸೃಷ್ಟಿಸಿತ್ತು. ಕಾಂಗ್ರೆಸ್ ನಾಯಕರೇ ಈ ಹೇಳಿಕೆಯನ್ನು ವಿರೋಧಿಸಿದ್ದರು. ಸ್ವತಃ ಸಿಪಿ ಯೋಗೇಶ್ವರ್ ಕೂಡ ಇದಕ್ಕೆ ವಿರೋಧ ವ್ಯಕ್ತಪಡಿಸಿದರು. ಸೋಲಿಗೆ ಇದು ಕೂಡ ಕಾರಣವಾಗಬಹುದು ಎಂದಿದ್ದರು. ಚನ್ನಪಟ್ಟಣದಲ್ಲಿ ಒಕ್ಕಲಿಗ ಮತಗಳು ಕ್ರೋಡೀಕರಣ ಆಗಲು ಜಮೀರ್ ನೀಡಿರುವ ಹೇಳಿಕೆ ಕಾರಣವಾಗಿದೆ ಎಂದೂ ಆರೋಪಿಸಿದ್ದರು. ಅಲ್ಲದೇ, ರಾಜ್ಯದ ಜನರು ವಕ್ಫ್ ವಿಷಯದಲ್ಲಿ ಜಮೀರ್ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಹೀಗಾಗಿ ಹಲವು ನಾಯಕರು ಜಮೀರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.