ಬಳ್ಳಾರಿ: ನಮ್ಮ ಸಚಿವ ಸ್ಥಾನದ ಕುರ್ಚಿಯನ್ನೇ ನಮಗೆ ಉಳಿಸಿಕೊಳ್ಳಲು ಆಗುತ್ತಿಲ್ಲ. ಅದುವೆ ಕಷ್ಟವಾಗಿರುವಾಗ ಸಿಎಂ ಬದಲಾವಣೆ ಬಗ್ಗೆ ಏನು ಮಾತನಾಡಲಿ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಹೊಸಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಮಾಡುವುದು ಹೈಕಮಾಂಡ್ ಗೆ ಬಿಟ್ಟ ವಿಚಾರ. ಕೆಪಿಸಿಸಿ ಅಧ್ಯಕ್ಷ ಸ್ಥಾನದ ನೇಮಕ ಕೂಡ ಮುಗಿದು ಹೋಗಿರುವ ಅಧ್ಯಾಯ. ಆ ವಿಷಯ ಬಂದಾಗ ಆ ಕುರಿತು ಮಾತನಾಡುತ್ತೇನೆ. ದಲಿತ ಸಚಿವರು, ಶಾಸಕರು ಸಭೆ ಮಾಡಿದ್ದೇವು. ಹಿಂದೆಯೂ ಮಾಡಿದ್ದೇವು. ಮುಂದೆಯೂ ಮಾಡುತ್ತೇವೆ ಎಂದಿದ್ದಾರೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿಯೇ ಇದೆ. ಒಮ್ಮೊಮ್ಮೆ ಕೈ ಮೀರಿ ಕೆಲವು ಪ್ರಮಾದಗಳು ನಡೆದು ಹೋಗಿರುತ್ತವೆ. ಆದರೆ, ಪೊಲೀಸರು ತಮ್ಮ ಕರ್ತವ್ಯ ತಾವು ನಿಭಾಯಿಸುತ್ತಾರೆ. ಕಮಿಷನರ್ ಅಮಾನತ್ತಿಗೆ ಸಂಬಂಧಿಸಿದಂತೆ ತನಿಖೆ ನಡೀತಾ ಇದೆ. ವರದಿ ಬಂದ್ಮೇಲೆ ಸರ್ಕಾರ ಕ್ರಮವಹಿಸುತ್ತೆ. ಕಾಲ್ತುಳಿತ ಪ್ರಕರಣವನ್ನು ಡಿಸಿ ಅವ್ರ ನೇತೃತ್ವದಲ್ಲಿ ತನಿಖೆ ನಡೆಸಲಾಗ್ತಿದೆ. ಸಿಐಡಿ (CID) ತನಿಖೆನೂ ನಡೀತಿದೆ. 15 ದಿನಗಳಲ್ಲಿ ವರದಿ ಬರಲಿದೆ. ಆದಾದ ಮೇಲೆ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದಿದ್ದಾರೆ.