ಬೆಂಗಳೂರು | ರಾಜ್ಯದಲ್ಲಿ ಗಾಂಜಾ ಘಾಟು ದೊಡ್ಡ ಸದ್ದು ಮಾಡುತ್ತಿದ್ದು, ಯುವ ಜನರ ಭವಿಷ್ಯದ ಬಗ್ಗೆ ತಲ್ಲಣ ಸೃಷ್ಟಿಯಾಗುತ್ತಿದೆ. ನಿರುದ್ಯೋಗ, ಬಡತನ, ಮೋಜು-ಮಸ್ತಿಯ ಗೀಳು ಯುವಪೀಳಿಗೆಯನ್ನು ಘಾಟಿನ ಬಲೆಗೆ ಬೀಳಿಸುತ್ತಿದೆ. ನಶೆಯ ಮೇಲೆ ಹೆಚ್ಚಾದ ಯುವಜನರ ಆಸಕ್ತಿ ಹಾಗೂ ಡ್ರಗ್ಸ್ ವ್ಯವಹಾರದಲ್ಲಿ ದೊಡ್ಡ ಮಟ್ಟದಲ್ಲಿ ಹಣದ ಹರಿವು ಇರುವುದು ಗಾಂಜಾ ಘಾಟು ಎಲ್ಲೆಡೆ ಪಸರಿಸುವಂತೆ ಮಾಡುತ್ತಿದೆ.
ದೇಶದ ಈಶಾನ್ಯ ರಾಜ್ಯಗಳು ಮತ್ತು ಉತ್ತರದ ಕೆಲವು ರಾಜ್ಯಗಳಂತೆ ಕರ್ನಾಟಕದಲ್ಲಿಯೂ ಮಾದಕ ವಸ್ತುಗಳ ಬಳಕೆ, ಸಂಗ್ರಹ ಮತ್ತು ಕಳ್ಳಸಾಗಾಣೆ ವ್ಯಾಪಕವಾಗಿದೆ. ಹೀಗಾಗಿಯೇ ರಾಜ್ಯದಲ್ಲಿ ಮಾದಕ ದ್ರವ್ಯಗಳ ತಯಾರಿಕೆ, ಕೃಷಿ, ಸಂಗ್ರಹ, ಮಾರಾಟ, ವ್ಯಾಪಾರ, ಸಾಗಣೆ, ರಫ್ತು, ಆಮದು ಮತ್ತು ಬಳಕೆ ಸಂಬಂಧದ ಮಾದಕ ವಸ್ತುಗಳು ಮತ್ತು ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆ(ಎನ್ ಡಿಪಿಎಸ್) ಅಡಿ ದಾಖಲಾಗುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿವೆ.
ರಾಜ್ಯದಲ್ಲಿ ಕಳೆದ 3 ವರ್ಷಗಳಲ್ಲಿ ಎನ್ ಡಿಪಿಎಸ್ ಕಾಯ್ದೆ 1985 ಅಡಿಯಲ್ಲಿ ಘಾಟಿನ ಪ್ರಕರಣಗಳು ಹೆಚ್ಚಾಗಿರುವುದು ಕೂಡ ಕಳವಳ ಉಂಟು ಮಾಡುತ್ತಿದೆ. ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಗೃಹ ಸಚಿವರು ನೀಡಿರುವ ಉತ್ತರ ಈಗ ಈ ಕಳವಳಕ್ಕೆ ಕಾರಣವಾಗುತ್ತಿದೆ.
ವರ್ಷ ಎನ್ ಡಿಪಿಎಸ್ ಅಡಿ ದಾಖಲಾದ ಪ್ರಕರಣ ಗಾಂಜಾ ಸಹಿತ ಇನ್ನಿತರ ಮಾದಕ ದ್ರವ್ಯ ಸಾಗಾಟ ಪ್ರಕರಣ
2023 6,767 1,511
2024 4,188 1,131
2025 6,824 1,305
2026 614 76
ಜ.15ರವೇಳೆಗೆ
ಒಟ್ಟು 18,393 4,023
ಅಲ್ಲದೇ, ಗಾಂಜಾ ಮಾರಾಟದ ಕ್ರಿಮಿಗಳು ಕಾಲೇಜುಗಳನ್ನು ಟಾರ್ಗೆಟ್ ಮಾಡಿಕೊಂಡಿರುವ ಆಘಾತಕಾರಿ ಸಂಗತಿಗಳೂ ಬೆಳಕಿಗೆ ಬಂದಿವೆ. ಕಳೆದ 2 ವರ್ಷಗಳಲ್ಲಿ ಶಾಲಾ-ಕಾಲೇಜು ಆವರಣದಲ್ಲಿ ಗಾಂಜಾ, ಕೋಕೆನ್ ಮತ್ತಿತರ ಮಾದಕ ವಸ್ತುಗಳ ಮಾರಾಟದ ಬಗ್ಗೆ ದಾಳಿ ನಡೆಸಲಾಗಿದೆ. ಬೆಂಗಳೂರು ಜಿಲ್ಲೆಯಲ್ಲಿ 2, ಕೊಡಗು ಜಿಲ್ಲೆಯಲ್ಲಿ 1 ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಸರ್ಕಾರವು ಶಾಲಾ ಕಾಲೇಜು ಆವರಣದಲ್ಲಿ ನಿಷೇಧಿತ ಪದಾರ್ಥಗಳ ಮಾರಾಟವನ್ನು ತಡೆಯಲು ಜಾಗೃತಿ, ಅರಿವು ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದ್ದು, ಇಲ್ಲಿಯವರೆಗೆ ಒಟ್ಟು ಇಂತಹ 39,611 ಜಾಗೃತಿಗಳನ್ನು ನಡೆಸಲಾಗಿದೆ. ಈ ಜಾಗೃತಿಯಲ್ಲಿ 40,32,790 ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ.
ಯುವ ಪೀಳಿಗೆಯನ್ನು ಥ್ರಿಲ್ ಬಯಕೆ, ಮೋಜು ಮಾಡುವ ಸಂಸ್ಕೃತಿ, ಒತ್ತಡ ಸೇರಿದಂತೆ ಇನ್ನಿತರ ಕಾರಣಗಳಿಂದ ಮಾದಕ ವಸ್ತುಗಳು ಸೆಳೆಯುತ್ತಿವೆ. ಸಿನಿಮಾ ಮಂದಿ, ಸೆಲೆಬ್ರಿಟಿಗಳು ಮಾದಕ ಪದಾರ್ಥ ಬಳಕೆದಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ವ್ಯಸನಕ್ಕೆ ಸಿಲುಕಿ ಕೆಲವು ಯುವಕ, ಯುವತಿಯರ ಭವಿಷ್ಯವೂ ಮುರುಟಿ ಹೋಗುತ್ತಿದೆ. ಹೀಗಾಗಿ ಕುಟುಂಬದ ಪ್ರಾಥಮಿಕ ಶಿಕ್ಷಣ, ಸಂಸ್ಕಾರ, ಭಯ ಬೇಕೇಬೇಕು. ಇನ್ನಾದರೂ ಯುವಭವಿಷ್ಯದ ಕುಡಿ ಮುರುಟಿ ಹೋಗದಂತೆ ನೋಡಿಕೊಳ್ಳೋಣ. ಪಾಲಕರೇ ಈ ವಿಷಯದಲ್ಲಿ ಎಚ್ಚೆತ್ತುಕೊಳ್ಳಬೇಕಿದೆ.
ಇದನ್ನೂ ಓದಿ : ಶ್ರೇಯಸ್ ಅಯ್ಯರ್ ಬಿಟ್ಟು ಕೆಕೆಆರ್ ತಪ್ಪು ಮಾಡಿದೆ – ಕೋಲ್ಕತ್ತಾ ತಂಡದ ನೀತಿಯನ್ನು ಕಟುವಾಗಿ ಟೀಕಿಸಿದ ಕುಂಬ್ಳೆ!



















