ನವದೆಹಲಿ: ಆಪರೇಷನ್ ಸಿಂದೂರ ಕಾರ್ಯಾಚರಣೆಯ ಕುರಿತು ವಿದೇಶಗಳಿಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ವಿದೇಶಗಳಿಗೆ ತೆರಳಿರುವ ಸರ್ವಪಕ್ಷ ನಿಯೋಗದ ಭಾಗವಾಗಿರುವ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಅವರು ಉಗ್ರರನ್ನು ಪೋಷಿಸುವ ಪಾಕಿಸ್ತಾನದ ಕೃತ್ಯವನ್ನು ಉದಾಹರಣೆ ಸಮೇತ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. 26/11ರ ಮುಂಬೈ ದಾಳಿಯ ಸಂಚುಕೋರ, ಉಗ್ರ ಝಕೀವುರ್ ರೆಹಮಾನ್ ಲಖ್ವಿಗೆ ಪಾಕಿಸ್ತಾನದ ಜೈಲಿನಲ್ಲಿ ಕೊಡುತ್ತಿದ್ದ ವಿಶೇಷ ಐಷಾರಾಮಿ ಸೌಲಭ್ಯಗಳನ್ನು ಉಲ್ಲೇಖಿಸುತ್ತಾ ಒವೈಸಿ ಅವರು ಪಾಕಿಸ್ತಾನದ ಬೆವರಿಳಿಸಿದ್ದಾರೆ.
ಅಲ್ಜೀರಿಯಾದಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಹೈದರಾಬಾದ್ ಸಂಸದ ಒವೈಸಿ, ಜೈಲಿನೊಳಗಿದ್ದುಕೊಂಡೇ ಹೈಪ್ರೊಫೈಲ್ ಉಗ್ರನಾದ ಲಖ್ವಿ ತಂದೆಯಾಗುತ್ತಾನೆ ಎಂದರೆ ಪಾಕಿಸ್ತಾನವು ಉಗ್ರರಿಗೆ ಎಂತಹ ಸೌಲಭ್ಯಗಳನ್ನು ನೀಡುತ್ತದೆ ಎನ್ನುವುದು ಅರ್ಥವಾಗುತ್ತದೆ ಎಂದು ಹೇಳಿದ್ದಾರೆ.
“ಝಕೀವುರ್ ರೆಹಮಾನ್ ಲಖ್ವಿ ಎಂಬ ಭಯೋತ್ಪಾದಕನಿದ್ದಾನೆ. ಯಾವ ದೇಶವೂ ಭಯೋತ್ಪಾದನೆಯ ಆರೋಪ ಹೊತ್ತ ವ್ಯಕ್ತಿಯನ್ನು ಜೈಲಿನಿಂದ ಹೊರಗೆ ಬರಲು ಬಿಡುವುದಿಲ್ಲ. ಆದರೆ, ಲಖ್ವಿ ಜೈಲಿನೊಳಗಿದ್ದುಕೊಂಡೇ ಮಗುವಿಗೆ ಅಪ್ಪನಾಗುತ್ತಾನೆ. ಅಂತಾರಾಷ್ಟ್ರೀಯ ಹಣಕಾಸು ಕಾರ್ಯಪಡೆಯು ಪಾಕಿಸ್ತಾನವನ್ನು ಬೂದು ಪಟ್ಟಿಯಲ್ಲಿ ಹಾಕಿದ್ದರೂ, ಉಗ್ರರಿಗೆ ಬೆಂಬಲವಾಗಿ ನಿಲ್ಲುವ ಪಾಕ್ನ ಚಾಳಿ ಮಾತ್ರ ನಿಂತಿಲ್ಲ” ಎಂದು ಒವೈಸಿ ಹೇಳಿದ್ದಾರೆ.
ಉಗ್ರರಿಗೆ ಹಣಕಾಸು ನೆರವು ನಿಗ್ರಹ ಸಂಸ್ಥೆಯಾದ ಎಫ್ಎಟಿಎಫ್ ಪಾಕಿಸ್ತಾನವನ್ನು ಮತ್ತೆ ಬೂದು ಪಟ್ಟಿಗೆ ಸೇರ್ಪಡೆಗೊಳಿಸಬೇಕು ಮತ್ತು ಅದರ ರೆಕ್ಕೆಗಳಿಗೆ ಕತ್ತರಿ ಹಾಕಬೇಕು ಎಂದು ನಾನು ಜಾಗತಿಕ ಸಮುದಾಯವನ್ನು ಕೇಳಿಕೊಳ್ಳುತ್ತೇನೆ ಎಂದೂ ಒವೈಸಿ ಹೇಳಿದ್ದಾರೆ.
ಅಲ್ಲದೇ, ಪಾಕಿಸ್ತಾನವು ಉಗ್ರರಿಗೆ ಬೆಂಬಲ ನೀಡುವ ಮೂಲಕ, ಅಮಾಯಕರನ್ನು ಕೊಲ್ಲುವ ಮೂಲಕ ಇಸ್ಲಾಂ ಧರ್ಮದ ಮೂಲ ಆಶಯಕ್ಕೇ ಕೊಡಲಿಯೇಟು ನೀಡುತ್ತಿದೆ. ಇಸ್ಲಾಂ ಎಂದಿಗೂ ಯಾರನ್ನೂ ಕೊಲ್ಲಲು ಅನುಮತಿಸುವುದಿಲ್ಲ ಎಂದಿದ್ದಾರೆ. ಈ ಮೂಲಕ ಅವರು ಪಹಲ್ಗಾಮ್ ನಲ್ಲಿ ನಡೆದ ಪ್ರವಾಸಿಗರ ಹತ್ಯೆಯನ್ನು ಖಂಡಿಸಿದ್ದಾರೆ. ಭಯೋತ್ಪಾದನೆ ಹುಟ್ಟಿರುವುದೇ ಪಾಕಿಸ್ತಾನದಿಂದ, ಅದನ್ನು ಪೋಷಿಸಿದ್ದು, ತರಬೇತಿ ನೀಡಿದ್ದು ಮತ್ತು ಬೆಳೆಸಿದ್ದೂ ಪಾಕಿಸ್ತಾನವೇ ಎಂದೂ ಒವೈಸಿ ಆರೋಪಿಸಿದ್ದಾರೆ.