ಹೈದರಾಬಾದ್: 2013ರಲ್ಲಿ ದಿಲ್ಸುಖ್ನಗರದಲ್ಲಿ ಸಂಭವಿಸಿದ ಅಳಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ವಿಶೇಷ ನ್ಯಾಯಾಲಯವು ಯಾಸಿನ್ ಭಟ್ಕಳ್ ಸೇರಿ ಐವರು ದೋಷಿಗಳಿಗೆ ವಿಧಿಸಿದ ಮರಣದಂಡನೆ ಶಿಕ್ಷೆಯನ್ನು ತೆಲಂಗಾಣ ಹೈಕೋರ್ಟ್ ಏಪ್ರಿಲ್ 8ರಂದು ಎತ್ತಿಹಿಡಿದಿದೆ. ಈ ಐವರು ದೋಷಿಗಳು ತಮ್ಮ ಶಿಕ್ಷೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಕ್ರಿಮಿನಲ್ ಅಪೀಲ್ಗಳನ್ನು ನ್ಯಾಯಾಲಯವು ತಿರಸ್ಕರಿಸಿದೆ.

2013 ರ ಫೆಬ್ರವರಿ 21 ರಂದು ಹೈದರಾಬಾದ್ನ ದಿಲ್ಸುಖ್ನಗರ್ನ ಜನನಿಬಿಡ ಪ್ರದೇಶದಲ್ಲಿ ಎರಡು ಭೀಕರ ಬಾಂಬ್ ಸ್ಫೋಟಗಳು ಸಂಭವಿಸಿದ್ದವು. ಈ ದಾಳಿಯಲ್ಲಿ 18 ಜನರು ಮೃತಪಟ್ಟಿದ್ದರು, ಇವರಲ್ಲಿ ಒಬ್ಬ ಗರ್ಭಿಣಿಯ ಗರ್ಭದಲ್ಲಿದ್ದ ಮಗು ಸೇರಿದ್ದು, ಮತ್ತು 131 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ದಾಳಿಯನ್ನು ನಿಷೇಧಿತ ಭಾರತೀಯ ಮುಜಾಹಿದೀನ್ (ಐಎಂ) ಉಗ್ರಗಾಮಿ ಸಂಘಟನೆಯ ಆರು ಆರೋಪಿಗಳು ಯೋಜಿಸಿದ್ದರು ಎಂದು ಎನ್ಐಎ ತನಿಖೆಯಲ್ಲಿ ಬಹಿರಂಗವಾಗಿತ್ತು. ಉಗ್ರ ಕೃತ್ಯದ ಮುಖ್ಯ ರೂವಾರಿ ರಿಯಾಜ್ ಭಟ್ಕಳ್ ಪಾಕಿಸ್ತಾನಕ್ಕೆ ಪರಾರಿಯಾಗಿದ್ದಾನೆ ಎಂದು ಶಂಕಿಸಲಾಗಿದ್ದು, ಐವರು ಆರೋಪಿಗಳ ವಿರುದ್ಧ ಮಾತ್ರ ವಿಚಾರಣೆ ನಡೆದಿತ್ತು. ಅಂತೆಯೇ ಎನ್ಐಎ ನ್ಯಾಯಾಲಯವು 2016 ರ ಡಿಸೆಂಬರ್ 16 ರಂದು ಅಸದುಲ್ಲಾ ಅಖ್ತರ್ (ಹದ್ದಿ), ಜಿಯಾ ಉರ್ ರೆಹಮಾನ್ (ವಕಾಸ್), ಮೊಹಮ್ಮದ್ ತಹಸೀನ್ ಅಖ್ತರ್, ಮೊಹಮ್ಮದ್ ಅಹ್ಮದ್ ಸಿದ್ದಿಬಾಪಾ (ಯಾಸಿನ್ ಭಟ್ಕಳ್), ಐಜಾಜ್ ಶೇಖ್ಗೆ ಮರಣದಂಡನೆ ವಿಧಿಸಿತ್ತು.

ಈ ದೋಷಿಗಳು ಭಾರತದ ವಿರುದ್ಧ ಯುದ್ಧ ಸಾರಲು ಉಗ್ರಗಾಮಿ ಚಟುವಟಿಕೆಗಳನ್ನು ರೂಪಿಸಿದ್ದರು ಎಂದು ಎನ್ಐಎ ತನ್ನ ಆರೋಪಪಟ್ಟಿಯಲ್ಲಿ ತಿಳಿಸಿತ್ತು. ಸ್ಫೋಟಗಳಲ್ಲಿ ಸೈಕಲ್ಗಳ ಮೇಲೆ ಇರಿಸಲಾಗಿದ್ದ ಇಂಪ್ರೊವೈಸ್ಡ್ ಎಕ್ಸ್ಪ್ಲೋಸಿವ್ ಡಿವೈಸ್ (ಐಇಡಿ) ಬಳಸಲಾಗಿತ್ತು, ಇದರಲ್ಲಿ ಉಕ್ಕಿನ ಮೊಳೆಗಳು, ಬೋಲ್ಟ್ಗಳು ಮತ್ತು ಅಮೋನಿಯಂ ನೈಟ್ರೇಟ್ ತುಂಬಲಾಗಿತ್ತು. ಮೊದಲ ಸ್ಫೋಟವು ದಿಲ್ಸುಖ್ನಗರ್ನ 107 ಬಸ್ ನಿಲ್ದಾಣದ ಬಳಿ ಸಂಭವಿಸಿದ್ದು, ಎರಡನೇ ಸ್ಫೋಟವು ಎ1 ಮಿರ್ಚಿ ಸೆಂಟರ್ ಸಮೀಪ ನಡೆದಿತ್ತು.

ಹೈಕೋರ್ಟ್ನ ಹೇಳಿದ್ದೇನು?
ನ್ಯಾಯಮೂರ್ತಿ ಕೆ. ಲಕ್ಷ್ಮಣ್ ಮತ್ತು ನ್ಯಾಯಮೂರ್ತಿ ಪಿ. ಶ್ರೀ ಸುಧಾ ಅವರ ದ್ವಿಸದಸ್ಯ ಪೀಠವು ಈ ಪ್ರಕರಣದಲ್ಲಿ ಎರಡು ಪ್ರಮುಖ ಅರ್ಜಿಗಳನ್ನು ವಿಚಾರಣೆಗೆ ಒಳಪಡಿಸಿತು: ಮೊದಲನೆಯದು ಮರಣದಂಡನೆಯ ದೃಢೀಕರಣಕ್ಕಾಗಿ ಸೆಷನ್ಸ್ ನ್ಯಾಯಾಧೀಶರಿಂದ ಮಾಡಲಾದ ಉಲ್ಲೇಖ, ಮತ್ತು ಎರಡನೆಯದು ದೋಷಿಗಳು ತಮ್ಮ ಶಿಕ್ಷೆಯನ್ನು ರದ್ದುಗೊಳಿಸುವಂತೆ ಸಲ್ಲಿಸಿದ ಅಪೀಲು. ಪ್ರಾಸಿಕ್ಯೂಷನ್ ಮತ್ತು ಡಿಫೆನ್ಸ್ನಿಂದ ಸುದೀರ್ಘ ವಾದ-ಪ್ರತಿವಾದಗಳನ್ನು ಆಲಿಸಿದ ನಂತರ, ಹೈಕೋರ್ಟ್ ಎನ್ಐಎ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿಯಿತು. ಈ ಘಟನೆಯ ಗಂಭೀರತೆ ಮತ್ತು ಸಾಕ್ಷ್ಯಗಳ ವಿಶ್ವಾಸಾರ್ಹತೆಯನ್ನು ಒತ್ತಿಹೇಳಿ, ದೋಷಿಗಳ ಅಪೀಲ್ಗಳನ್ನು ತಿರಸ್ಕರಿಸಲಾಗಿದೆ.
ಈ ತೀರ್ಪಿನ ಬಗ್ಗೆ ದಿಲ್ಸುಖ್ನಗರ್ ಬಾಂಬ್ ಸ್ಫೋಟದ ಸಂತ್ರಸ್ತರು ಸಂತೋಷ ವ್ಯಕ್ತಪಡಿಸಿದ್ದಾರೆ. “ತೀರ್ಪು ತಡವಾದರೂ, ಸಂತ್ರಸ್ತರಿಗೆ ನ್ಯಾಯ ಒದಗಿಸಿದೆ” ಎಂದು ಎ1 ಮಿರ್ಚಿ ಸೆಂಟರ್ನ ಮಾಲೀಕ ಕೆ. ಪಾಂಡು ರೆಡ್ಡಿ ಹೇಳಿದ್ದಾರೆ.