ಬೆಂಗಳೂರು : ಸಂಸದ ತೇಜಸ್ವಿ ಸೂರ್ಯರನ್ನು ಸಿಎಂ ಸಿದ್ದರಾಮಯ್ಯ ಅಮಾವಾಸ್ಯೆ ಸೂರ್ಯ ಎಂದು ಪದೇ ಪದೇ ಟೀಕಿಸುತ್ತಲೇ ಇರುತ್ತಾರೆ. ಮೊನ್ನೆ ಕೂಡ ತೇಜಸ್ವಿ ಸೂರ್ಯರನ್ನು ಅಮಾವಾಸ್ಯೆ ಸೂರ್ಯ ಎಂದು ಸಿಎಂ ಟೀಕಿಸಿದ್ದರು.
ಈ ಹೇಳಿಕೆಗೆ ;ಇದೀಗ ಸಂಸದ ತೇಜಸ್ವಿ ಸೂರ್ಯ ತಿರುಗೇಟು ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತೇಜಸ್ವಿ ಸೂರ್ಯ ಆಕ್ರೋಶ ವ್ಯಕ್ತಪಡಿಸಿದ್ದು, ಸಿದ್ದರಾಮಯ್ಯ ಬಹಳ ಅನುಭವಿಗಳು, ನನಗೆ ಅಶ್ಚರ್ಯ ಆಗುತ್ತಿದೆ. ಅವರಿಗೆ ಗೊತ್ತಾಗುವುದಿಲ್ಲವೇ? ಅಮಾವಾಸ್ಯೆ ದಿನವೂ ಸೂರ್ಯ ಇರುತ್ತಾನೆ. ಹುಣ್ಣಿಮೆ ದಿನವೂ ಸೂರ್ಯ ಇರುತ್ತಾನೆ. ವರ್ಷದ 365 ದಿನವೂ ಪ್ರಪಂಚವನ್ನು ಬೆಳಗುವವನು ಸೂರ್ಯನೇ, ಅಮಾವಾಸ್ಯೆ ದಿನ ಇಲ್ಲದೇ ಇರೋದು ಚಂದ್ರ ಮಾತ್ರ ಎಂದು ಹೇಳಿದ್ದಾರೆ.
ಮುಂದುವರೆದು, ಬಹುಶಃ ನೀವು ಚಂದ್ರನನ್ನು ನೋಡಿ ಪೂಜೆ ಮಾಡುವವರ ಜೊತೆ ಜಾಸ್ತಿ ಇದ್ದೀರಾ ಎಂದು ಅನ್ನಿಸುತ್ತದೆ. ಅವರ ಜೊತೆಗೇ ಸೇರಿ ನೀವು ಸೂರ್ಯನಿಗೂ, ಚಂದ್ರನ ಮಧ್ಯೆ ಕನ್ಪ್ಯೂಸ್ ಆಗಿಬಿಟ್ಟಿದ್ದೀರಿ ಎಂದು ತೇಜಸ್ವಿ ಸೂರ್ಯ ತಮ್ಮದೇ ಸ್ಟೈಲ್ನಲ್ಲಿ ತಿರುಗೇಟು ನೀಡಿದ್ದಾರೆ.
ರಾಜ್ಯದ ಆರ್ಥಿಕ ಸ್ಥಿತಿಗತಿ ಬಗ್ಗೆ ಮಾಹಿತಿ ಸಿಗುತ್ತಿಲ್ಲ. ಮೊದಲು ರಾಜ್ಯ ಸರ್ಕಾರ ಆರ್ಥಿಕ ಸ್ಥಿತಿಗತಿಯ ಬಗ್ಗೆ ಶ್ವೇತಪತ್ರ ಹೊರಡಿಸಲಿ ಎಂದು ಸಂಸದ ತೇಜಸ್ವಿ ಸೂರ್ಯ, ರಾಜ್ಯದ ಹಣಕಾಸು ಖಾತೆಯನ್ನು ಹೊಂದಿರುವ ಸಿಎಂ ಸಿದ್ದರಾಮಯ್ಯಗೆ ಆಗ್ರಹಿಸಿದ್ದಾರೆ.