ನವದೆಹಲಿ: ಭಾರತೀಯ ವಾಯುಪಡೆಯ ಹೆಮ್ಮೆಯ ಸ್ವದೇಶಿ ನಿರ್ಮಿತ ‘ತೇಜಸ್‘ ಲಘು ಯುದ್ಧ ವಿಮಾನವು (LCA) ಈ ತಿಂಗಳ ಆರಂಭದಲ್ಲಿ ಅಪಘಾತಕ್ಕೀಡಾದ ಬೆನ್ನಲ್ಲೇ, ಮುನ್ನೆಚ್ಚರಿಕಾ ಕ್ರಮವಾಗಿ ವಾಯುಪಡೆಯು ತನ್ನ ಎಲ್ಲಾ 30 ಏಕ-ಆಸನದ ತೇಜಸ್ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ವಿಮಾನ ಪತನಕ್ಕೆ ತಾಂತ್ರಿಕ ದೋಷವೇ ಕಾರಣವಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ಸಮಗ್ರ ತಾಂತ್ರಿಕ ತಪಾಸಣೆ ನಡೆಸಲು ವಾಯುಪಡೆ ನಿರ್ಧರಿಸಿದೆ.

ದಿಢೀರ್ ನಿರ್ಧಾರಕ್ಕೆ ಕಾರಣವೇನು?
ಇತ್ತೀಚೆಗೆ ವಾಯುಪಡೆಯ ಪ್ರಮುಖ ವಾಯುನೆಲೆಯೊಂದರಲ್ಲಿ ತರಬೇತಿ ಹಾರಾಟ ಮುಗಿಸಿ ತೇಜಸ್ ವಿಮಾನವು ಲ್ಯಾಂಡಿಂಗ್ ಆಗುತ್ತಿದ್ದಾಗಲೇ ಅವಘಡ ಸಂಭವಿಸಿತ್ತು. ವಿಮಾನದ ಆನ್ಬೋರ್ಡ್ ಸಿಸ್ಟಮ್ಗಳಲ್ಲಿ ಉಂಟಾದ ತಾಂತ್ರಿಕ ಸಮಸ್ಯೆಯೇ ಪತನಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿತ್ತು. ವಿಮಾನವು ನೆಲಕ್ಕೆ ಅಪ್ಪಳಿಸುವ ಮುನ್ನ ಪೈಲಟ್ ಯಶಸ್ವಿಯಾಗಿ ಹೊರಕ್ಕೆ ಜಿಗಿದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದರು. ಆದರೆ, ವಿಮಾನದ ಚೌಕಟ್ಟು (ಏರ್ಫ್ರೇಮ್) ತೀವ್ರವಾಗಿ ಜಖಂಗೊಂಡಿದ್ದು, ಮರುಬಳಕೆ ಅಸಾಧ್ಯ ಎನ್ನುವಂಥ ಸ್ಥಿತಿಗೆ ತಲುಪಿತ್ತು.
3ನೇ ಬಾರಿಗೆ ಪತನ
ತೇಜಸ್ ವಿಮಾನಗಳು ಭಾರತೀಯ ವಾಯುಪಡೆಗೆ ಸೇರ್ಪಡೆಯಾದ ನಂತರ ಸಂಭವಿಸುತ್ತಿರುವ 3ನೇ ಅಪಘಾತ ಇದಾಗಿದೆ. ಮೊದಲ ಬಾರಿಗೆ 2024ರ ಮಾರ್ಚ್ನಲ್ಲಿ ಜೈಸಲ್ಮೇರ್ ಬಳಿ ವಿಮಾನ ಪತನಗೊಂಡಿತ್ತು. ತದನಂತರ 2025ರ ನವೆಂಬರ್ನಲ್ಲಿ ದುಬೈ ಏರ್ಶೋ ಸಂದರ್ಭದಲ್ಲಿ ನಡೆದ 2ನೇ ಅಪಘಾತದಲ್ಲಿ ಪೈಲಟ್ ಮೃತಪಟ್ಟಿದ್ದರು. ಆ ಘಟನೆಯ ತನಿಖೆ ಇನ್ನೂ ಪ್ರಗತಿಯಲ್ಲಿದೆ. ಈಗ ಸಂಭವಿಸಿರುವ ಈ ಮೂರನೇ ಅವಘಡವು ಯುದ್ಧ ವಿಮಾನಗಳ ಸುರಕ್ಷತೆಯ ಬಗ್ಗೆ ಕಳವಳ ಮೂಡಿಸಿದೆ.
ತೇಜಸ್ ಎಂಕೆ-1ಎ ಯೋಜನೆಗೆ ಹಿನ್ನಡೆ?
ವಾಯುಪಡೆಯು ಈಗಾಗಲೇ 180 ಸುಧಾರಿತ ‘ತೇಜಸ್ ಎಂಕೆ-1ಎ’ ವಿಮಾನಗಳಿಗೆ ಬೇಡಿಕೆ ಸಲ್ಲಿಸಿದೆ. ಆದರೆ, ಈ ಯೋಜನೆಯು ನಿಗದಿತ ಸಮಯಕ್ಕಿಂತ ಸುಮಾರು ಎರಡು ವರ್ಷಗಳಷ್ಟು ವಿಳಂಬವಾಗಿ ನಡೆಯುತ್ತಿದೆ. ಈಗಿನ ಸರಣಿ ಅಪಘಾತಗಳು ಮತ್ತು ತಾಂತ್ರಿಕ ತಪಾಸಣೆಯ ಕಾರಣದಿಂದಾಗಿ ಹೊಸ ವಿಮಾನಗಳ ವಿತರಣೆ ಮತ್ತು ಸೇವೆಯ ಮೇಲೆ ಮತ್ತಷ್ಟು ಪರಿಣಾಮ ಬೀರುವ ಸಾಧ್ಯತೆಯಿದೆ. ವಾಯುಪಡೆಯು ಈ ಬಗ್ಗೆ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲವಾದರೂ, ವಿಮಾನಗಳ ಸಂಪೂರ್ಣ ಸುರಕ್ಷತೆಯನ್ನು ಖಚಿತಪಡಿಸಿಕೊಂಡ ನಂತರವಷ್ಟೇ ಹಾರಾಟಕ್ಕೆ ಮರುಚಾಲನೆ ನೀಡಲು ನಿರ್ಧರಿಸಿದೆ.
ಇದನ್ನೂ ಓದಿ : ಡ್ರಗ್ ಮಾಫಿಯಾ ಡಾನ್ ‘ಎಲ್ ಮೆಂಚೋ’ ಹತ್ಯೆ | ವ್ಯಾಪಕ ಹಿಂಸಾಚಾರ, ಹೊತ್ತಿ ಉರಿದ ಮೆಕ್ಸಿಕೋ



















