ದಡಹಲಿ : ‘ಕಾಂತಾರ ಚಾಪ್ಟರ್ 1’ ಸಿನಿಮಾ ಬಗ್ಗೆ ದೇಶಾದ್ಯಂತ ಜನರು ಮಾತನಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿ, ನಿರ್ದೇಶನ ಮಾಡಿರುವ ರಿಷಬ್ ಶೆಟ್ಟಿ ಅವರಿಗೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಇದೀಗ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ‘ಕಾಂತಾರ: ಚಾಪ್ಟರ್ 1’ ಸಿನಿಮಾ ತಂಡವನ್ನು ಭೇಟಿ ಮಾಡಿದ್ದಾರೆ. ದೆಹಲಿ ಸಿಎಂ ರೇಖಾ ಗುಪ್ತಾ ಅವರ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಈ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ. ‘ಇಂದು ಮುಖ್ಯಮಂತ್ರಿ ಜನಸೇವಾ ಸದನದಲ್ಲಿ ಕಾಂತಾರ : ಚಾಪ್ಟರ್ 1 ನಟ, ನಿರ್ದೇಶಕ ರಿಷಬ್ ಶೆಟ್ಟಿ ಮತ್ತು ಅವರ ತಂಡವನ್ನು ಭೇಟಿ ಮಾಡಲಾಯಿತು’ ಎಂದು ಪೋಸ್ಟ್ ಮಾಡಲಾಗಿದೆ.

‘ಕಾಂತಾರ: ಚಾಪ್ಟರ್ 1 ಚಿತ್ರವು ಭಾರತದ ಆಧ್ಯಾತ್ಮಿಕ ಆಳ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಸುಂದರವಾಗಿ ಪ್ರತಿಬಿಂಬಿಸುತ್ತದೆ. ನಮ್ಮ ಸಂಪ್ರದಾಯಗಳ ಸಾರವನ್ನು ಜೀವಂತಗೊಳಿಸುತ್ತದೆ’ ‘ಕಾಂತಾರ ರೀತಿಯ ಕೃತಿಗಳು ನಮ್ಮ ಪರಂಪರೆಯ ಚೈತನ್ಯವನ್ನು ಜಾಗತಿಕ ವೇದಿಕೆಗೆ ಹೆಮ್ಮೆಯಿಂದ ಕೊಂಡೊಯ್ಯುತ್ತವೆ’ ಎಂದು ರೇಖಾ ಗುಪ್ತಾ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ವೇಳೆ ರಿಷಬ್ ಶೆಟ್ಟಿ ಜೊತೆ ಪತ್ನಿ ಪ್ರಗತಿ ಶೆಟ್ಟಿ, ಕಾಂತಾರ ನಾಯಕಿ ರುಕ್ಮಿಣಿ ವಸಂತ್ ಮುಂತಾದ ಚಿತ್ರತಂಡ ಸದಸ್ಯರು ಹಾಜರಿದ್ದರು.