ತುಮಕೂರು: ಬೀದಿ ದೀಪ (Street Light) ಆರಿಸಲು ಹೋಗಿ ಶಿಕ್ಷಕರೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಗುಬ್ಬಿ ತಾಲೂಕಿನ ಬ್ಯಾಡಗೆರೆ ಸರ್ಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಬೀದಿ ದೀಪ ಆರಿಸಲು ಹೋಗಿ ವಿದ್ಯುತ್ ಸ್ಪರ್ಶಿಸಿ ಶಿಕ್ಷಕ (Teacher) ಸಾವನ್ನಪ್ಪಿದ್ದಾರೆ. ಬ್ಯಾಡಗೆರೆ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ನಿಟ್ಟೂರು ಗ್ರಾಮದ ಲೋಕೇಶ್ ರಾವ್ (35) ಸಾವನ್ನಪ್ಪಿದ್ದಾರೆ.
ಬೆಳಗ್ಗೆ ಮನೆ ಸಮೀಪದ ಬೀದಿ ದೀಪ ಆರಿಸಲು ಹೋದ ಸಂದರ್ಭದಲ್ಲಿ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ್ದಾರೆ. ಬೀದಿ ದೀಪಗಳಿಗೆ ಅಳವಡಿಸಿರುವ ವೈರ್ಗೆ ಸ್ವಿಚ್ ಹಾಕುವಂತೆ ಅನೇಕ ಬಾರಿ ಸಂಬಂಧಿಸಿದ ಬೆಸ್ಕಾಂ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಿದ್ದರು. ಆದರೂ ಅವರು ಕ್ರಮ ಕೈಗೊಂಡಿರಲಿಲ್ಲ. ಹೀಗಾಗಿ ಸ್ವಿಚ್ ಅಳವಡಿಸುವುದಕ್ಕೆ ಬದಲಾಗಿ ವೈರನ್ನೇ ಒಂದಕ್ಕೊಂದು ಸ್ಪರ್ಶಿಸಿ ಇಟ್ಟಿರುವುದೇ ಅನಾಹುತಕ್ಕೆ ಕಾರಣ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪತ್ನಿ, ಎರಡು ವರ್ಷದ ಹೆಣ್ಣು ಮಗು ಹಾಗೂ ಒಂದು ತಿಂಗಳ ಮಗುವನ್ನು ಶಿಕ್ಷಕರು ಅಗಲಿದ್ದಾರೆ.