ನವದೆಹಲಿ: ದೆಹಲಿ ವಿಧಾನಸಭೆ ಅಧಿವೇಶನದಲ್ಲಿ ಮಂಗಳವಾರ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಸಿಎಜಿ(ಮಹಾಲೇಖಪಾಲ) ವರದಿ ಮಂಡನೆಗೆ ಸಂಬಂಧಿಸಿ ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಆಪ್ ಶಾಸಕರ ನಡುವೆ ಭಾರೀ ವಾಗ್ವಾದ ನಡೆದಿದೆ. ಕೊನೆಗೆ ಆಮ್ ಆದ್ಮಿ ಪಕ್ಷದ ಮಾಜಿ ಮುಖ್ಯಮಂತ್ರಿ ಮತ್ತು ವಿಪಕ್ಷ ನಾಯಕಿ ಆತಿಷಿ ಮರ್ಲೇನಾ ಸೇರಿದಂತೆ ಆಪ್ನ 12 ಶಾಸಕರನ್ನು ದೆಹಲಿ ವಿಧಾನಸಭೆಯಿಂದ ಒಂದು ದಿನದ ಮಟ್ಟಿಗೆ ಅಮಾನತುಗೊಳಿಸಲಾಗಿದೆ. ಈ ಪೈಕಿ ಆಪ್ ಹಿರಿಯ ನಾಯಕ ಗೋಪಾಲ್ ರಾಯ್ ಕೂಡ ಒಬ್ಬರು.
ಇದಾದ ಬಳಿಕ ಸ್ಪೀಕರ್ ವಿಜೇಂದರ್ ಗುಪ್ತಾ ಅವರು ಕಲಾಪವನ್ನು ಮಧ್ಯಾಹ್ನದವರೆಗೆ ಮುಂದೂಡಿಕೆ ಮಾಡಿದರು. ಅಧಿವೇಶನ ಆರಂಭವಾಗುತ್ತಿದ್ದಂತೆ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಸದನವನ್ನುದ್ದೇಶಿಸಿ ಮಾತನಾಡಿದರು. ಈ ವೇಳೆ ಆಪ್ ಶಾಸಕರು ಬಿಜೆಪಿ ಸರ್ಕಾರದ ವಿರುದ್ಧ ಜೋರಾಗಿ ಘೋಷಣೆಗಳನ್ನು ಕೂಗಲಾರಂಭಿಸಿದ್ದರಿಂದ, ಲೆ.ಗವರ್ನರ್ ಅವರ ಭಾಷಣಕ್ಕೆ ಅಡ್ಡಿಯಾಯಿತು. ಶಾಸಕರಿಗೆ ಶಾಂತವಾಗಿರುವಂತೆ ಸ್ಪೀಕರ್ ವಿಜೇಂದರ್ ಗುಪ್ತಾ ಅವರು ಎಷ್ಟೇ ಮನವಿ ಮಾಡಿದರೂ ಕೋಲಾಹಲ ಮುಂದುವರಿಯಿತು. ಕೊನೆಗೆ ಸ್ಪೀಕರ್ ಶಾಸಕರನ್ನು ಒಂದು ದಿನದ ಮಟ್ಟಿಗೆ ಅಮಾನತುಗೊಳಿಸಿದರು.
ಅಮಾನತುಗೊಂಡ ಬಳಿಕವೂ ಆಪ್ ಶಾಸಕರು ವಿಧಾನಸಭೆ ಆವರಣದಲ್ಲಿ ಧರಣಿ ನಡೆಸಿದ್ದಾರೆ. ಮುಖ್ಯಮಂತ್ರಿ ಕಚೇರಿಯಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವನ್ನು ತೆಗೆದುಹಾಕುವ ಮೂಲಕ ಅವರಿಗೆ ಬಿಜೆಪಿ ಅಗೌರವ ತೋರಿದೆ ಎಂದು ಆತಿಷಿ ಆರೋಪಿಸಿದ್ದಾರೆ.
“ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ತೆಗೆದುಹಾಕುವ ಮೂಲಕ ಬಿಜೆಪಿ ತನ್ನ ನಿಜವಾದ ಬಣ್ಣವನ್ನು ತೋರಿಸಿದೆ. ಬಾಬಾ ಸಾಹೇಬ್ ಅವರ ಸ್ಥಾನವನ್ನು ಪ್ರಧಾನಿ ನರೇಂದ್ರ ಮೋದಿ ತುಂಬಬಲ್ಲರು ಎಂದು ಆ ಪಕ್ಷ ನಂಬಿದೆಯೇ? ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವನ್ನು ಅದರ ಸ್ಥಾನದಲ್ಲಿ ಇರಿಸುವವರೆಗೂ ನಾವು ಪ್ರತಿಭಟನೆ ಮುಂದುವರಿಸುತ್ತೇವೆ” ಎಂದು ವಿಪಕ್ಷ ನಾಯಕಿ ಆತಿಷಿ ಹೇಳಿದರು.
ಇದೇ ಸಂದರ್ಭದಲ್ಲಿ ಸಸ್ಪೆಂಡ್ ಆದ ಎಲ್ಲ ಆಪ್ ಶಾಸಕರು “ಬಾಬಾಸಾಹೇಬ್ ಕಾ ಯೆ ಅಪ್ಮಾನ್ ನಹೀ ಸಹೇಗಾ ಹಿಂದೂಸ್ತಾನ್ (ಬಾಬಾ ಸಾಹೇಬ್ ಅವರಿಗೆ ಈ ಅವಮಾನವನ್ನು ಭಾರತ ಸಹಿಸುವುದಿಲ್ಲ)” ಎಂಬ ಘೋಷಣೆಗಳನ್ನು ಕೂಗಿದರು.
ಈ ಹಿಂದಿನ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರದಲ್ಲಿ ನಡೆದಿದೆ ಎನ್ನಲಾದ ಹಣಕಾಸು ಅಕ್ರಮಗಳ ಕುರಿತಾದ 14 ಸಿಎಜಿ ವರದಿಗಳನ್ನು ಇಂದು ಅಥವಾ ನಾಳೆ ವಿಧಾನಸಭೆಯಲ್ಲಿ ಮಂಡಿಸಲು ಬಿಜೆಪಿ ಸಿದ್ಧತೆ ನಡೆಸಿರುವಂತೆಯೇ ಈ ಹೈಡ್ರಾಮಾ ನಡೆದಿದೆ.