ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ಶ್ರೇಯಸ್ ಅಯ್ಯರ್ ಅವರ ಚೇತರಿಕೆಗಾಗಿ ಟಿ20 ನಾಯಕ ಸೂರ್ಯಕುಮಾರ್ ಯಾದವ್ ಅವರ ತಾಯಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಛಠ್ ಪೂಜೆಯ ಸಂದರ್ಭದಲ್ಲಿ ಅವರು ಪ್ರಾರ್ಥಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ವಿಡಿಯೋದಲ್ಲಿ ಸೂರ್ಯಕುಮಾರ್ ಅವರ ತಾಯಿ ಸ್ವಪ್ನಾ ಯಾದವ್, “ಶ್ರೇಯಸ್ ಅಯ್ಯರ್ ಆರೋಗ್ಯ ಸರಿಯಿಲ್ಲ ಎಂದು ಕೇಳಿ ತುಂಬಾ ದುಃಖವಾಯಿತು. ಅವರಿಗಾಗಿ ಎಲ್ಲರೂ ಪ್ರಾರ್ಥಿಸಿ” ಎಂದು ಮನವಿ ಮಾಡಿದ್ದಾರೆ. ಸಹ ಆಟಗಾರನ ಬಗ್ಗೆ ಅವರಿಗಿರುವ ಕಾಳಜಿ ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
ಶಸ್ತ್ರಚಿಕಿತ್ಸೆ ಯಶಸ್ವಿ, ಆರೋಗ್ಯ ಸ್ಥಿರ
ಆಸೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಕ್ಯಾಚ್ ಹಿಡಿಯುವ ಯತ್ನದಲ್ಲಿ ಶ್ರೇಯಸ್ ಅಯ್ಯರ್ ಅವರ ಪಕ್ಕೆಲುಬಿಗೆ ಗಂಭೀರ ಗಾಯವಾಗಿತ್ತು. ಆಂತರಿಕ ರಕ್ತಸ್ರಾವ ಉಂಟಾದ ಕಾರಣ ಅವರನ್ನು ತೀವ್ರ ನಿಗಾ ಘಟಕದಲ್ಲಿ (ICU) ಇರಿಸಲಾಗಿತ್ತು. ಇದೀಗ ಸಣ್ಣ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಅವರ ಆರೋಗ್ಯದಲ್ಲಿ ಗಮನಾರ್ಹ ಚೇತರಿಕೆ ಕಂಡುಬಂದಿದೆ. ಅವರನ್ನು ಐಸಿಯುನಿಂದ ವಾರ್ಡ್ಗೆ ಸ್ಥಳಾಂತರಿಸಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಅವರು ಇನ್ನೂ ಐದು ದಿನಗಳ ಕಾಲ ಆಸ್ಪತ್ರೆಯಲ್ಲಿ ವೈದ್ಯರ ನಿಗಾದಲ್ಲಿರಲಿದ್ದಾರೆ.
ಸ್ನೇಹಿತನ ಬಗ್ಗೆ ಸೂರ್ಯಕುಮಾರ್ ಹೇಳಿದ್ದೇನು
ಸ್ನೇಹಿತನ ಆರೋಗ್ಯದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸೂರ್ಯಕುಮಾರ್ ಯಾದವ್, “ನಾನು ಅವರೊಂದಿಗೆ ಮಾತನಾಡಿದ್ದೇನೆ, ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಆತಂಕಪಡುವ ಅಗತ್ಯವಿಲ್ಲ. ಅವರು ಫೋನ್ಗೆ ಉತ್ತರಿಸುತ್ತಿದ್ದಾರೆ, ಅಂದರೆ ಅವರು ಸ್ಥಿರವಾಗಿದ್ದಾರೆ. ಇನ್ನೂ ಕೆಲವು ದಿನ ವಿಶ್ರಾಂತಿ ಪಡೆಯುವುದಾಗಿ ಹೇಳಿದ್ದಾರೆ” ಎಂದು ತಿಳಿಸಿದ್ದಾರೆ.
ಮೊದಲ ಟಿ20 ಪಂದ್ಯ ಮಳೆಗೆ ಆಹುತಿ
ಇದೇ ವೇಳೆ, ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟಿ20 ಪಂದ್ಯವು ಕ್ಯಾನ್ಬೆರಾದಲ್ಲಿ ಮಳೆಯಿಂದಾಗಿ ರದ್ದುಗೊಂಡಿದೆ. ಭಾರತ 9.4 ಓವರ್ಗಳಲ್ಲಿ 1 ವಿಕೆಟ್ಗೆ 97 ರನ್ ಗಳಿಸಿದ್ದಾಗ ಮಳೆ ಅಡ್ಡಿಪಡಿಸಿತು.
ಇದನ್ನೂ ಓದಿ : ಸ್ಪ್ಯಾಮ್ ಕಾಲ್ಸ್, ಆನ್ಲೈನ್ ವಂಚನೆ ತಡೆಗೆ ಮಹತ್ವದ ಕ್ರಮ : ಇಲ್ಲಿದೆ ಹೊಸ ಅಪ್ಡೇಟ್


















