ಉಡುಪಿ : ಪ್ರಧಾನ ಮಂತ್ರಿ ಸೂರ್ಯಘರ್ ಯೋಜನೆ ಜನರಿಗೆ ಅನಗತ್ಯ ಆರ್ಥಿಕ ಹೊರೆಯನ್ನು ಹೊರೆಸುವ ಯೋಜನೆ. ಇದರಿಂದ ಜನಸಾಮಾನ್ಯರಿಗೆ ಯಾವುದೇ ಪ್ರಯೋಜನವಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಹೇಳಿದ್ದಾರೆ.
ಪ್ರಧಾನ ಮಂತ್ರಿ ಸೂರ್ಯಘರ್ ಯೋಜನೆ ಹೆಸರಿನಲ್ಲಿ ಮನೆಗಳಿಗೆ ಸೌರ ಫಲಕಗಳನ್ನು ಅಳವಡಿಸಲು ಸಬ್ಸಿಡಿ ಹಾಗೂ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವುದಾಗಿ ಕೇಂದ್ರ ಸರ್ಕಾರ ಜಾಹಿರಾತುಗಳನ್ನು ನೀಡುತ್ತಿದ್ದು ಇದೊಂದು ಅನುಪಯುಕ್ತ ಹಾಗೂ ಜನಸಾಮಾನ್ಯರಿಗೆ ಆರ್ಥಿಕ ಹೊರೆ ಹೇರುವ ಯೋಜನೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಕರ್ನಾಟಕದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಗೃಹ ಜ್ಯೋತಿ ಯೋಜನೆಯ ಮೂಲಕ 200 ಯೂನಿಟ್ ತನಕ ಉಚಿತ ವಿದ್ಯುತ್ ನೀಡುತ್ತಿದ್ದು, ರಾಜ್ಯದ ಸುಮಾರು ಶೇ.80ಕ್ಕಿಂತ ಹೆಚ್ಚಿನ ಫಲಾನುಭವಿಗಳು ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿದ್ದಾರೆ.
ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಸೂರ್ಯಘರ್ ಉಚಿತ ವಿದ್ಯುತ್ ಯೋಜನೆ ಹೆಸರಿಗೆ ಮಾತ್ರ ಉಚಿತ. ಆದರೆ ಸಬ್ಸಿಡಿ ಹೆಸರಿನಲ್ಲಿ ಫಲಾನುಭವಿಗಳಿಗೆ ಸಾಲ ನೀಡಿ ನಂತರ ಫಲಾನುಭವಿಗಳಿಗೆ ಅನಗತ್ಯ ಸಾಲದ ಸುಳಿಯಲ್ಲಿ ಸಿಲುಕಿಸುವ ಯೋಜನೆ ಎಂದು ಹೇಳಿದ್ದಾರೆ.
ಸೋಲಾರ್ ದಾರಿದೀಪ ಇತ್ಯಾದಿ ಸೋಲಾರ್ ಉಪಕರಣಗಳು ಈಗಾಗಲೇ ಸರಿಯಾದ ನಿರ್ವಹಣೆ ಇಲ್ಲದೆ ಯೋಜನೆಗಳು ನಿರುಪಯುಕ್ತವಾಗಿರುವ ಕಾಲಘಟ್ಟದಲ್ಲಿ ಸೂರ್ಯ ಘರ್ ಸೌರ ವಿದ್ಯುತ್ ಯೋಜನೆ ಕೂಡ ಜನರಿಗೆ ಅನಗತ್ಯ ಆರ್ಥಿಕ ಹೊರೆ ನೀಡುವ ಯೋಜನೆಯಾಗಿದೆ. ಪಂಚ ಗ್ಯಾರಂಟಿಗಳ ಮೂಲಕ ನೆಮ್ಮದಿಯ ಬದುಕನ್ನು ಕಾಣುತ್ತಿರುವ ಕರ್ನಾಟಕ ರಾಜ್ಯದಲ್ಲಿ ಅನಗತ್ಯ ಆರ್ಥಿಕ ಹೊರೆ ನೀಡುವುದು ಜನವಿರೋಧಿ ಕ್ರಮವೆಂದವರು ಟೀಕಿಸಿದ್ದಾರೆ.