ಚಿಕ್ಕಬಳ್ಳಾಪುರ: ಮಂಚೇನಹಳ್ಳಿಯಲ್ಲಿ ರೈತನ ಮೇಲೆ ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಪ್ರದೀಪ್ ಈಶ್ವರ್ ವಿರುದ್ದ ಸಂಸದ ಡಾ. ಕೆ. ಸುಧಾಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಶಾಸಕನಿದ್ದಾಗ ಕನಗಾನಕುಪ್ಪ ಗ್ರಾಮದ ಬಳಿ ಕ್ರಷರ್ ಮಾಡಲು ಬಿಡಲಿಲ್ಲ. ಈಗ ಅದೇ ಗ್ರಾಮದಲ್ಲಿ ಸಿನಿಮಾ ಡೈಲಾಗ್ ಹೊಡೆದು ಕ್ರಷರ್ ನಿಲ್ಲಿಸುತ್ತೇನೆ ಎಂದು ವ್ಯಕ್ತಿ ಹೇಳಿದ್ದಾನೆ. ಇವತ್ತು ಎಷ್ಟು ಹಣಕ್ಕೆ ಮಾರಾಟ ಆಗಿದ್ದಾನೆ? ಜಿಲ್ಲೆಯಲ್ಲಿನ ಪೊಲೀಸರು ಏನಾಗಿದ್ದಾರೆ? ಅಧಿಕಾರಿಗಳು ತಮ್ಮ ಕೈಗೆ ತಾವೇ ಬೇಡಿ ಹಾಕಿಕೊಂಡಿದ್ದಾರಾ? ಎಂದು ಪ್ರಶ್ನೆ ಮಾಡಿದ್ದಾರೆ.
ನನ್ನ 50 ವರ್ಷಗಳಲ್ಲಿ ಯಾವತ್ತೂ ಶೂಟೌಟ್ ಕಂಡಿರಲಿಲ್ಲ. ಹಾಡು ಹಗಲೇ ಗುಂಡಿಕ್ಕಿ ಶೂಟ್ ಮಾಡುತ್ತಾನೆ ಅಂದ್ರೆ ಅರ್ಥ ಏನು? ಆ ಹುಡುಗ ಸಾವನ್ನಪ್ಪಿದರೆ ಗತಿ ಏನು? ಡಿಸಿಗೆ ದುಡ್ಡು ಕೊಟ್ಟರೆ ಯಾವುದಕ್ಕೆ ಬೇಕಾದರೂ ಸಹಿ ಹಾಕುತ್ತಾರೆ. ಚಿಕ್ಕಬಳ್ಳಾಪುರ ಹೆಸರನ್ನು ನಾನು ರಾಷ್ಟ್ರ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದೆ. ಆದರೆ, ನೀವು ಹಾಡು ಹಗಲೇ ಗನ್ ಶೂಟ್ ಮಾಡುವ ಮಟ್ಟಕ್ಕೆ ತಂದಿದ್ದೀರಿ ನಮಸ್ಕಾರ ಎಂದು ವ್ಯಂಗ್ಯವಾಡಿದ್ದಾರೆ.