ಬೆಂಗಳೂರು: ಕರ್ನಾಟಕ ಸೇರಿ ದೇಶಾದ್ಯಂತ ನಿರುದ್ಯೋಗ ಸಮಸ್ಯೆ ಕಾಡುತ್ತಿದೆ. ಕೋಟ್ಯಂತರ ಯುವಕರು ಪದವಿ, ಸ್ನಾತಕೋತ್ತರ ಪದವಿ ಮುಗಿಸಿಯೂ ನಿರುದ್ಯೋಗಿಗಳಾಗಿ ಕಾಲ ಕಳೆಯುವಂತಾಗಿದೆ. ಇದನ್ನು ಮನಗಂಡಿರುವ ರಾಜ್ಯ ಸರ್ಕಾರವು 2029ರ ವೇಳೆಗೆ 20 ಲಕ್ಷ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡುತ್ತಿದೆ. ಇದಕ್ಕಾಗಿ, ಎಂಎಸ್ಎಂಇ ಸೇರಿ ಹಲವು ಉದ್ಯಮಗಳಿಗೆ ಉತ್ತೇಜನ ನೀಡುತ್ತಿದೆ.
ಸಣ್ಣ ಉದ್ಯಮಗಳ ಸೃಷ್ಟಿ, ಗುಡಿ ಕೈಗಾರಿಕೆ ಮೂಲಕ ಉದ್ಯೋಗ ಸೃಷ್ಟಿಗಾಗಿ ‘ಎಸ್ಎಂಇ ಕನೆಕ್ಟ್’ ಹಾಗೂ ‘ವೆಂಚುರಸ್’ ರೀತಿಯ ರಚನಾತ್ಮಕ ಉಪಕ್ರಮಗಳ ಮೂಲಕ ರಾಜ್ಯವು ಈಗಾಗಲೇ ಎಂಎಸ್ಎಂಇ ತಯಾರಿಕಾ ವಲಯದಲ್ಲಿ ಶೇ.12ರಷ್ಟು ಪ್ರಗತಿ ಸಾಧಿಸಿದೆ. ಇದೇ ವಲಯದಿಂದ ರಾಜ್ಯದಲ್ಲಿ 2029ರ ವೇಳೆಗೆ ಬರೋಬ್ಬರಿ 20 ಲಕ್ಷ ಉದ್ಯೋಗ ಸೃಷ್ಟಿಯಾಗುತ್ತದೆ ಎಂದು ಹೇಳಲಾಗುತ್ತಿದೆ.
ಇತ್ತೀಚೆಗೆ ಕಾಸಿಯಾ, ಎಫ್.ಕೆ.ಸಿ.ಸಿ.ಐ ಮತ್ತು ಪೀಣ್ಯ ಕೈಗಾರಿಕೆಗಳ ಒಕ್ಕೂಟ ದಿಂದ ನಡೆದ ‘ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಮಾವೇಶ-2025’ರಲ್ಲಿ ಉದ್ಯೋಗ ಸೃಷ್ಟಿಯ ಬಗ್ಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರು ಮಹತ್ವದ ಮಾಹಿತಿ ನೀಡಿದರು. ರಾಜ್ಯದಲ್ಲಿ 2 ಮತ್ತು 3 ನೇ ಹಂತದ ನಗರಗಳಲ್ಲಿ ಎಂಎಸ್ಎಂಸಿ ಉದ್ಯಮಗಳು ನೆಲೆಯೂರುವಂತೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲಿನ ಮೂಲಸೌಕರ್ಯ ಅಭಿವೃದ್ಧಿಗೆ ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.
ಕರ್ನಾಟಕದಲ್ಲಿ 38 ಲಕ್ಷ ಎಂಎಸ್ಎಂಇಗಳಿವೆ. ಇವು ಲಕ್ಷಾಂತರ ಜನರಿಗೆ ಉದ್ಯೋಗ ನೀಡುವ ಜತೆಗೆ ಸಾವಿರಾರು ಕೋಟಿ ವಹಿವಾಟು ನಡೆಸುತ್ತಿವೆ. ಭಾರತದ ಜಿಡಿಪಿ ಬೆಳವಣಿಗೆಗೆ ಎಂಎಸ್ಎಂಇ ವಲಯವು ಶೇಕಡ 30ರಷ್ಟು ಕೊಡುಗೆ ನೀಡುತ್ತಿವೆ. ಒಟ್ಟು 15 ಕೋಟಿ ಜನರಿಗೆ ಬದುಕು ನೀಡಿವೆ. ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲೂ ಉದ್ಯೋಗ ಕ್ರಾಂತಿ ಆಗಲಿದೆ ಎಂದರು.