ಉಳ್ಳಾಲ: ಇಲ್ಲಿನ ಶ್ರೀ ಚೀರುಂಭ ಭಗವತಿ ಕ್ಷೇತ್ರ ಮತ್ತು ಶ್ರೀ ಚೀರುಂಭ ಭಗವತಿ ತಿಯಾ ಸಮಾಜ ಸೇವಾ ಸಂಘ ಭಾನುವಾರ ಆಯೋಜಿಸಿದ್ದ ‘ತೀಯರೆ ಚೇರ್ಲಿ ಒರಿನಾಳ್’ ಕೆಸರು ಗದ್ದೆ ಕ್ರೀಡಾಕೂಟದಲ್ಲಿ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಭಾಗವಹಿಸಿ ಮಿಂಚಿದ್ದಾರೆ.
ಮಾಡೂರು ಶ್ರೀ ಪಾಡಾಂಗರ ಭಗವತಿ ಕ್ಷೇತ್ರದ ಪಕ್ಕದ ಗದ್ದೆಯಲ್ಲಿ ನಡೆದ ಕ್ರೀಡಾಕೂಟಕ್ಕೆ ತೆರಳಿದ್ದ ಖಾದರ್ ಅವರು ಕೆಸರು ಗದ್ದೆಗೆ ಇಳಿದು ಓಡಾಡಿ ಗಮನ ಸೆಳೆದರು. ‘ಗದ್ದೆಗೆ ನಾನೂ ಇಳಿಯುತ್ತೇನೆ’ ಎಂದು ಹೇಳುತ್ತಲೇ ಪಾಲ್ಗೊಂಡ ಅವರು ಸಮುದಾಯದವರ ಮನರಂಜನೆಯಲ್ಲಿ ಭಾಗಿಯಾದರು. ಕೆಸರು ಗದ್ದೆಯಲ್ಲಿ ಸ್ಥಳೀಯರೊಂದಿಗೆ ಬೆರೆತ ಸ್ಪೀಕರ್ ಖುಷಿ ಪಟ್ಟರು. ಸ್ಥಳೀಯರೂ ಕೂಡ ಅವರ ಭಾಗವಹಿಸುವಿಕೆಯನ್ನು ಶ್ಲಾಘಿಸಿದರು.
ಬೆಂಗಳೂರಿನ ಶಿಲ್ಪಾ ಎಚ್ ಮತ್ತು ಎಂ.ನವೀನ್ ದಂಪತಿ ಚಾಲನೆ ಕ್ರೀಡಾಕೂಟಕ್ಕೆ ಬೆಳಿಗ್ಗೆ ಚಾಲನೆ ನೀಡಿದರು. ತೊಕ್ಕೊಟ್ಟು ಸಾಯಿ ಪರಿವಾರ್ ಸೇವಾ ಟ್ರಸ್ಟ್ ಗೌರವಾಧ್ಯಕ್ಷ ಪ್ರವೀಣ್ ಶೆಟ್ಟಿ ಪಿಲಾರು ಮೇಗಿನಮನೆ ಅವರು ಕೆಸರುಗದ್ದೆ ಕೂಟಕ್ಕೆ ಚಾಲನೆ ನೀಡಿದರು. ಚೀರುಂಭ ಭಗವತೀ
ಕ್ಷೇತ್ರದ ಅಧ್ಯಕ್ಷ ಚಿದಾನಂದ ಗುರಿಕಾರ ನಂದ್ಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಡಳಿತ ಮೊತ್ತೇಸರ ಸುರೇಶ್ ಭಟ್ನಾಗರ್ ಉಪಸ್ಥಿತರಿದ್ದರು.
ವಿವಿಧ ವಿನೋದ, ಆಹಾರ ವೈವಿಧ್ಯ, ಹಾಸ್ಯ ವಿನೋದ, ನೃತ್ಯರಂಜನೆ, ಗೀತಗಾಯನ, ಆಟೋಟ ಸ್ಪರ್ಧೆಗಳು ನಡೆದವು.



















