ಗದಗ: ಬುದ್ಧಿ ಹೇಳಿದ್ದಕ್ಕೆ ಪಾಪಿ ಮಗನೊಬ್ಬ ತಾಯಿಯನ್ನೇ ಕೊಲೆ ಮಾಡಿರುವ ಘಟನೆ ನಡೆದಿದೆ.
ತಾಯಿ ಮಲಗಿದ್ದಾಗ ಹೆತ್ತ ತಾಯಿಯನ್ನು ಕೊಂದಿರುವ (Murder Case) ಘಟನೆ ಗದಗ ನಗರದ ದಾಸರ ಓಣಿಯಲ್ಲಿ ಜರುಗಿದೆ. ಶಾರದಮ್ಮ ಅಗಡಿ (85) ಕೊಲೆಯಾಗಿರುವ ದುರ್ದೈವ ತಾಯಿ. ಪುತ್ರ ಸಿದ್ಧಲಿಂಗ ಅಗಡಿ ಕೊಲೆ ಮಾಡಿರುವ ಆರೋಪಿ ಮಗ ಎನ್ನಲಾಗಿದೆ.
ಆರೋಪಿ ಮಗ ಮಂಗಳವಾರವಷ್ಟೇ ಪಕ್ಕದ ಮನೆಯವರ ಜತೆ ಸಿದ್ಧಲಿಂಗ ಅಗಡಿ ಜಗಳ ಮಾಡಿದ್ದ. ಆಗ ತಾಯಿಯು ನನ್ನ ಮಗನ ತಲೆ ಸರಿಯಿಲ್ಲ. ಆತನನ್ನು ಬಿಟ್ಟು ಬಿಡಿ ಎಂದು ಬೇಡಿಕೊಂಡಿದ್ದರು. ಆನಂತರ ಪಾಪಿ ಮಗ ತಾಯಿ ಮಲಗಿದಾಗ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಕೊಲೆ ಮಾಡಿದ್ದಲ್ಲದೇ, ತನ್ನ ಸಹೋದರಿಯರಿಗೆ ಕರೆ ಮಾಡಿ ತಾಯಿ ಸತ್ತಿರುವ ಬಗ್ಗೆ ಹೇಳಿದ್ದಾನೆ. ಆದರೆ, ಮಾನಸಿಕ ಅಸ್ವಸ್ಥ ಸಹೋದರನ ಮಾತು ನಂಬಿರಲಿಲ್ಲ. ಆದರೆ, ಅಕ್ಕಂದಿರಿಗೆ ಪೊಲೀಸರು ಮಾಹಿತಿ ನೀಡಿದಾಗ ಓಡೋಡಿ ಬಂದಿದ್ದಾರೆ. ಸ್ಥಳಕ್ಕೆ ಎಸ್ಪಿ ಬಿ ಎಸ್ ನೇಮಗೌಡ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಗದಗ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.