ಮಂಗಳೂರು | ಒಮಾನ್ ದೇಶದಲ್ಲಿ ಉದ್ಯೋಗದಲ್ಲಿದ್ದ ಸೋಮೇಶ್ವರ ಮೂಲದ ಯುವಕನೋರ್ವ ತನ್ನ ಕೊಠಡಿಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ತಾನು ಪ್ರೀತಿಸುತ್ತಿದ್ದ ಹುಡುಗಿ ನಾಲ್ಕು ವರ್ಷಗಳ ಪ್ರೀತಿಯನ್ನ ನಿರಾಕರಿಸಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ.
ಸೋಮೇಶ್ವರದ ಚಂದ್ರ ಮತ್ತು ದೀಪಾ ದಂಪತಿಯ ಹಿರಿಯ ಪುತ್ರ ಪುನೀತ್ ಪೂಜಾರಿ (32) ಮೃತ ಯುವಕ. ಪುನೀತ್ ಕಳೆದ ಒಂದೂವರೆ ವರ್ಷಗಳಿಂದ ಒಮಾನ್ ದೇಶದಲ್ಲಿ ಲಿಫ್ಟ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಒಂದೂವರೆ ತಿಂಗಳ ಹಿಂದಷ್ಟೆ ಊರಿಗೆ ಬಂದಿದ್ದ ಪುನೀತ್ ಮತ್ತೆ ಒಮನ್ಗೆ ಮರಳಿದ್ದ.
ಇನ್ನು, ಪುನೀತ್ ಕಳೆದ ನಾಲ್ಕು ವರ್ಷಗಳಿಂದ ಮಂಗಳೂರಿನ ಉರ್ವಾ ನಿವಾಸಿ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದರು. ಬಹಳ ಅನ್ನೋನ್ಯವಾಗಿದ್ದ ಜೋಡಿಯು ಹಲವೆಡೆ ಸುತ್ತಾಡಿರುವ ಫೋಟೊಗಳನ್ನ ಜಾಲತಾಣಗಳಲ್ಲಿ ಹಾಕಿದ್ದರು. ಇತ್ತೀಚಿನ ದಿನಗಳಲ್ಲಿ ಯುವತಿ ಪುನೀತ್ ಫೋನ್ ಕರೆಗಳನ್ನು ಸ್ವೀಕರಿಸದೇ, ಸಂದೇಶಗಳಿಗೂ ಪ್ರತಿಕ್ರಿಯೆ ನೀಡದೇ ಪ್ರೀತಿಯನ್ನ ನಿರಾಕರಿಸುತ್ತಿದ್ದಳು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರೇಯಸಿಯೊಂದಿಗೆ ವಿರಸ ತಾಳಲಾರದೆ ಪುನೀತ್ ಮನನೊಂದಿದ್ದು, ಈ ವಿಚಾರವನ್ನು ತನ್ನ ಆಪ್ತ ಗೆಳೆಯರಲ್ಲೂ ಪ್ರಸ್ತಾಪಿಸಿದ್ದರು. ಪ್ರೇಮ ವೈಫಲ್ಯದ ಸಂಕಟದಲ್ಲಿ ನರಳುತ್ತಿದ್ದ ಪುನೀತ್ ಸಾಮಾಜಿಕ ಜಾಲತಾಣದಲ್ಲಿ ಲೈವ್ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ.
ಸದ್ಯ ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಅಶಾಂತ ಪರಿಸ್ಥಿತಿಯ (ಇರಾನ್ ಸಂಘರ್ಷ) ಹಿನ್ನೆಲೆ ಒಮನ್ ದೇಶದ ಕಾನೂನು ಪ್ರಕ್ರಿಯೆ ಪೂರ್ಣಗೊಳ್ಳಲು ಹೆಚ್ಚುವರಿ ಸಮಯ ಬೇಕಾಗುವ ಸಾಧ್ಯತೆ ಇದ್ದು, ಮೃತದೇಹವನ್ನ ಭಾರತಕ್ಕೆ ತರಲು ವಿಳಂಬವಾಗಬಹುದೆಂದು ಕುಟುಂಬದ ಆಪ್ತರು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಶಬರಿಮಲೆ ಪ್ರವೇಶಕ್ಕೆ ಮಹಿಳೆಯರಿಗೆ ಅವಕಾಶ ಬೇಡ | ಸುಪ್ರೀಂಗೆ ಕೇರಳ



















