ಬೆಂಗಳೂರು\ರಾಯಚೂರು : ರಾಯಚೂರು ಜಿಲ್ಲೆಯ ಹಟ್ಟಿ ಚಿನ್ನದ ಗಣಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಮಹಿಳಾ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಅವರು ಪ್ರಾದೇಶಿಕ ಕಾರ್ಮಿಕ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ಹಲವಾರು ಮಹಿಳೆಯರು ಅನುಕಂಪದ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದು, ಇವರುಗಳಿಗೆ ನೇಮಕಾತಿ ಸಂದರ್ಭದಲ್ಲಿ ತಾರತಮ್ಯವನ್ನು ಮಾಡುತ್ತಿರುವುದಾಗಿ ಹಾಗೂ ಅವರಿಗೆ ಸಿಗಬೇಕಾದ ಮೂಲಭೂತ ಸೌಲಭ್ಯಗಳನ್ನು ಒದಗಿಸದ ಕುರಿತು ಹಟ್ಟಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಹಿಳಾ ಕಾರ್ಮಿಕರು ಮನವಿ ಮೂಲಕ ನನ್ನ ಗಮನಕ್ಕೆ ತಂದಿರುತ್ತಾರೆ. ಹೀಗಾಗಿ ಶೀಘ್ರವೇ ಈ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ನಾಗಲಕ್ಷ್ಮೀ ಚೌಧರಿ ಅವರು ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಮಹಿಳಾ ಕಾರ್ಮಿಕರ ಸಮಸ್ಯೆಗಳು ಈ ಕೆಳಗಿನಂತಿವೆ |
- ಮಹಿಳಾ ಕಾರ್ಮಿಕರಿಗೆ ಋತುಚಕ್ರದ ರಜೆ ನೀಡುತ್ತಿರುವುದಿಲ್ಲ. ಸರ್ಕಾರದ ಆದೇಶದನ್ವಯ ಅರ್ಹರಿರುವ ಎಲ್ಲಾ ಮಹಿಳೆಯರಿಗೆ ಋತುಚಕ್ರದ ರಜೆ ನೀಡುವುದು.
- ವಸತಿ ವಿತರಣೆಯಲ್ಲಿ ಮಹಿಳಾ ಕಾರ್ಮಿಕರಿಗೆ ಮೀಸಲಾತಿ ನೀಡುವುದು.
- ಕಂಪನಿಯಲ್ಲಿ ದೂರು ನಿವಾರಣಾ ಸಮಿತಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು.
- ಕಂಪನಿಯಲ್ಲಿರುವ ಮಹಿಳಾ ಕಾರ್ಮಿಕರಿಗೆ ಸ್ತ್ರೀ ರೋಗಗಳಿಗೆ ಸಂಬಂಧಿಸಿದಂತೆ ಹಾಗೂ ಕಾನೂನುಗಳಿಗೆ ಸಂಬಂಧಿಸಿದಂತೆ ಅರಿವಿನ ಕಾರ್ಯಕ್ರಮವನ್ನು ಏರ್ಪಡಿಸುವುದು.
- ಮಹಿಳಾ ಕಾರ್ಮಿಕರಿಗೆ ಹೆರಿಗೆ ರಜೆ, ಶಿಶುಪಾಲನಾ ರಜೆ ಹಾಗೂ ಸಂತಾನಹರಣ ಚಿಕಿತ್ಸಾ ರಜೆ ಮುಂತಾದ ಸರ್ಕಾರದ ನಿಯಮಾವಳಿಗಳಲ್ಲಿರುವ ಪ್ರಕಾರ ಇರುವ ಎಲ್ಲಾ ಸೌಲಭ್ಯಗಳನ್ನು ನೀಡುವುದು.
- ವಿಶೇಷ ಚೇತನ ನೌಕರರಿಗೆ ಸರ್ಕಾರದ ಆದೇಶದನ್ವಯ ಮುಂಬಡ್ತಿಯಲ್ಲಿ ಪ್ರಾತಿನಿಧ್ಯವನ್ನು ನೀಡುವುದು.
- ಕಂಪನಿಯಲ್ಲಿ ಮಹಿಳಾ ಕಾರ್ಮಿಕರ ಸಂಖ್ಯೆ ಹೆಚ್ಚಿರುವುದರಿಂದ ಮಹಿಳೆಯರಿಗೆ ಶೌಚಾಲಯಗಳ ಸಂಖ್ಯೆಯನ್ನು ಹೆಚ್ಚಿಸುವುದು ಹಾಗೂ ಪ್ರಸ್ತುತ ಇರುವ ಶೌಚಾಲಯಗಳನ್ನು ನವೀಕರಿಸುವುದು.
- ಕಂಪನಿಯಲ್ಲಿರುವ ಶೌಚಾಲಯಗಳಲ್ಲಿ ಪ್ಯಾಡ್ ಡಿಸ್ಪೆನ್ಸರಿ ಹಾಗೂ ಪ್ಯಾಡ್ ಡಿಸ್ಪೋಸಲ್ ಯಂತ್ರಗಳನ್ನು ಆಳವಡಿಸಲು ಕ್ರಮ ವಹಿಸುವುದು.
- ಕಾಲಕಾಲಕ್ಕೆ ಕ್ಯಾನ್ಸರ್, ಶ್ವಾಸಕೋಶ ಸಂಬಂಧಿತ ಕಾಯಿಲೆಗಳು ಮುಂತಾದ ಗಂಭೀರ ರೋಗಗಳಿಗೆ ಸಂಬಂಧಿಸಿದಂತೆ ಆರೋಗ್ಯ ತಪಾಸಣಾ ಶಿಬಿರಗಳನ್ನು ಏರ್ಪಡಿಸಿ

ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿ, ಮಹಿಳೆಯರ ಘನತೆ, ಗೌರವ ಮತ್ತು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಕಾನೂನಿನಡಿಯಲ್ಲಿ ಮಹಿಳಾ ಕಾರ್ಮಿಕರಿಗೆ ಸರ್ಕಾರದಿಂದ ಸಿಗಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಿಕೊಟ್ಟು, ಕೈಗೊಂಡ ಕ್ರಮದ ವರದಿಯನ್ನು ಆದಷ್ಟು ಬೇಗ ಆಯೋಗಕ್ಕೆ ಕಳುಹಿಸಿಕೊಡುವಂತೆ ಡಾ. ನಾಗಲಕ್ಷ್ಮೀ ಚೌಧರಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಜೆಸಿಬಿಗಳ ಘರ್ಜನೆ – 200 ಮನೆಗಳು ನೆಲಸಮ



















