ಉಡುಪಿ : ಪ್ರಸಿದ್ಧ ಪೌರಾಣಿಕ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸಮರ್ಪಿತವಾದ ಬೆಳ್ಳಿರಥದ ಮೆರವಣಿಗೆ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಕೋಟೇಶ್ವರದಿಂದ ಹೊರಟಿದೆ. ಸುಳ್ಯದ ಅಕಾಡೆಮಿ ಆಫ್ ಲಿಬೆರಲ್ ಎಜುಕೇಶನ್ ತಂಡದ ಅಧ್ಯಕ್ಷ ಕೆ.ವಿ.ರೇಣುಕಾ ಪ್ರಸಾದ್ ಮತ್ತು ಅವರ ಕುಟುಂಬಸ್ಥರ ಸಂಕಲ್ಪದಂತೆ ನೀಡಲಾಗುತ್ತಿರುವ ಈ ಬೆಳ್ಳಿ ರಥವನ್ನು ಕುಂಭಾಶಿ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರದಲ್ಲಿ ನಿರ್ಮಿಸಲಾಗಿದ್ದು, ಇಂದು ಕುಕ್ಕೆಯತ್ತ ಹೊರಟಿದೆ.

ಜಕಣಾಚಾರಿ ಪ್ರಶಸ್ತಿ ಪುರಸ್ಕೃತರಾದ ಕೋಟೇಶ್ವರದ ಖ್ಯಾತ ರಥಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ ಮತ್ತು ಪುತ್ರ ರಥಶಿಲ್ಪಿ ರಾಜಗೋಪಾಲ್ ಆಚಾರ್ಯ ತಂಡ ನಿರ್ಮಿಸಿದ ಬೆಳ್ಳಿರಥ ಇದಾಗಿದ್ದು, ಇಂದು ಬೆಳಿಗ್ಗೆ ಮೆರವಣಿಗೆಗೆ ಚಾಲನೆ ನೀಡಲಾಯಿತು. ನವೆಂಬರ್ 10ರಂದು ಸೇವಾಕರ್ತರಿಂದ ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಈ ಬೆಳ್ಳಿರಥ ಸಮರ್ಪಣೆಯಾಗಲಿದೆ.

14 ಅಡಿ ಎತ್ತರದ, 1.80 ಕೋಟಿ ರೂ ವೆಚ್ಚದ ಬೆಳ್ಳಿರಥ!
ಬರೋಬ್ಬರಿ 189 ರಥಗಳನ್ನು ಕುಂಭಾಶಿ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರ ನಿರ್ಮಿಸಿದ್ದು, ಆ ಪೈಕಿ 14ನೇ ಬೆಳ್ಳಿರಥ ಇದಾಗಿದೆ. ಬೆಳ್ಳಿರಥವು 14 ಅಡಿ ಎತ್ತರವಿದ್ದು, ರಥದ ಮೇಲ್ಭಾಗದಲ್ಲಿ ಎರಡು ಅಡಿ ಎತ್ತರದ ಚಿನ್ನದ ಕಳಸ ಇರಿಸಲಾಗಿದೆ. ಒಟ್ಟು 16 ಅಡಿ ಎತ್ತರದ ರಥ ಇದಾಗಿದೆ. ಸರಿಸುಮಾರು 110 ಕೆಜಿ ಬೆಳ್ಳಿಯನ್ನು ರಥ ನಿರ್ಮಾಣಕ್ಕೆ ಉಪಯೋಗಿಸಲಾಗಿದ್ದು, 1.80 ಕೋಟಿ ವೆಚ್ಚ ತಗುಲಿದೆ.

ಇದನ್ನೂ ಓದಿ : ಸೀರಿಯಲ್ ನಟಿಯರಿಗೆ ನಿಲ್ಲದ ಕಿರುಕುಳ | ಅಶ್ಲೀಲ ವಿಡಿಯೋ ಕಳಿಸಿ ವಿಕೃತಿ ಮೆರೆದ ಕಾಮುಕ



















