ಬೆಂಗಳೂರು: ರೈಲು ಪ್ರಯಾಣದ ಕೊನೆಯ ಕ್ಷಣದಲ್ಲಿ ರಿಸರ್ವೇಷನ್ ಟಿಕೆಟ್ ಪಡೆಯಲು ರೈಲ್ವೆ ಇಲಾಖೆ ಜಾರಿಗೊಳಿಸಿರುವ ತತ್ಕಾಲ್ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯು ಉತ್ತಮವಾಗಿದೆ. ಇದರ ಮಧ್ಯೆಯೇ, ತತ್ಕಾಲ್ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಇದರ ಕುರಿತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರೇ ಮಾಹಿತಿ ನೀಡಿದ್ದಾರೆ.
ತತ್ಕಾಲ್ ರೈಲು ಟಿಕೆಟ್ಗಳನ್ನು ಬುಕಿಂಗ್ ಮಾಡಲು ಭಾರತೀಯ ರೈಲ್ವೆ ಕಡ್ಡಾಯ ಇ-ಆಧಾರ್ ದೃಢೀಕರಣವನ್ನು ಪರಿಚಯಿಸಲು ಸಜ್ಜಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಎಕ್ಸ್ ಜಾಲತಾಣದ ಪೋಸ್ಟ್ ಮೂಲಕ ತಿಳಿಸಿದ್ದಾರೆ. ಮತ್ತೊಂದೆಡೆ, ಈ ಹೊಸ ವ್ಯವಸ್ಥೆಯು ಈ ತಿಂಗಳ ಕೊನೆಯಲ್ಲಿ ಜಾರಿಯಾಗುವ ನಿರೀಕ್ಷೆಯಿದೆ ಎಂದು ತಿಳಿದುಬಂದಿದೆ.
“ಅಗತ್ಯವಿರುವ ನೈಜ ಬಳಕೆದಾರರು ದೃಢೀಕೃತ ಟಿಕೆಟ್ ಪಡೆಯಲು ಈ ಕ್ರಮ ನೆರವಾಗಲಿದೆ” ಎಂದು ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಐ ಆರ್ ಸಿ ಟಿ ಸಿ ಟಿಕೆಟ್ ಪೋರ್ಟಲ್ ಮೂಲಕ ಅನಧಿಕೃತವಾಗಿ ಸ್ವಯಂಚಾಲಿತ ರೈಲು ಟಿಕೆಟ್ ಮುಂಗಡ ಕಾಯ್ದಿರಿಸುವಿಕೆಯನ್ನು ಮಟ್ಟ ಹಾಕಲು ಬಳಕೆಗೆ ತರಲಾಗಿರುವ ತನ್ನ ಕೃತಕ ಬುದ್ಧಿಮತ್ತೆ ಚಾಲಿತ ವ್ಯವಸ್ಥೆಯು ಯಶಸ್ವಿಯಾಗಿದೆ. ಹಾಗಾಗಿ, ಹೊಸ ಕ್ರಮ ಜಾರಿಗೆ ತರಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಇದುವರೆಗೆ ಟಿಕೆಟ್ ಮುಂಗಡ ಕಾಯ್ದಿರಿಸುವಿಕೆಗೆ ಬಳಸಲಾಗುತ್ತಿದ್ದ ಸುಮಾರು 2.5 ಕೋಟಿಗೂ ಹೆಚ್ಚು ಶಂಕಾಸ್ಪದ ಬಳಕೆದಾರರ ಐಡಿಗಳನ್ನು ನಿಷ್ಕ್ರಿಯಗೊಳಿಸಿದೆ ಎಂದು ಬುಧವಾರ ಭಾರತೀಯ ರೈಲ್ವೆ ತಿಳಿಸಿದೆ. ಇಂತಹ ಅಕ್ರಮ ತಡೆಯಲು ಇನ್ನುಮುಂದೆ ಆಧಾರ್ ವೇರಿಫಿಕೇಶನ್ ಕಡ್ಡಾಯಗೊಳಿಸಲಾಗುತ್ತಿದೆ.