ತುಮಕೂರು: ಸಿದ್ದರಾಮಯ್ಯನವರು ಒಳ್ಳೆಯ ಲೇವಲ್ ನಲ್ಲಿ ಇದ್ದಾರೆ ಎನ್ನುವುದು ನನ್ನ ಭಾವನೆ. ಆದರೆ, ಈಗ ಅದನ್ನು ಕೆಡಿಸಿಕೊಳ್ಳಬಾರದು ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಗಣತಿ ವರದಿಗೆ 10 ವರ್ಷ ಕಳೆದಿದೆ. ಕಾಂತರಾಜುನೇ ಸಹಿ ಹಾಕದೇ ಓಡಿ ಹೋಗಿದ್ದರು. ಆನಂತರ ಜಯಪ್ರಕಾಶ್ ಹೆಗ್ಡೆ ಕರೆ ತರಲಾಯಿತು. ಅವರು ಕೂಡ ಎಲ್ಲೋ ಒಂದು ಕಡೆ ಮಕ್ಕಿಕಾ ಮಕ್ಕಿ ಆದರು. ಎಲ್ಲರಿಗೂ ಸ್ವಾರ್ಥ ತುಂಬಿ ಥುಳುಕಿತ್ತು. ಇದರಲ್ಲಿ ಯಾರಿಗೆ ತೊಂದರೆ ಅನ್ನೋದಕ್ಕಿಂತ ಹೆಚ್ಚಾಗಿ ಗೊಂದಲ ಸೃಷ್ಟಿಯಾಗಿದೆ. ಹೀಗಾಗಿ ಮತ್ತಷ್ಟು ಗೊಂದಲ ಮಾಡಿಕೊಳ್ಳಬೇಡಿ. ಕೂಡಲೇ ವರದಿ ತಿರಸ್ಕರಿಸಿ, ಮತ್ತೆ ಪ್ರತಿಯೊಂದನ್ನೂ ಪಾರದರ್ಶಕವಾಗಿ ರೀ ಸರ್ವೇ ಮಾಡಿ ಎಂದು ಹೇಳಿದ್ದಾರೆ.
ನಿಮ್ಮ ಕಾಲದಲ್ಲೇ ಅನೌನ್ಸ್ ಮಾಡಿ ನೀವೇ ಕ್ರೆಡಿಟ್ ತಗೊಳ್ಳಿ. ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಮಾಡಬೇಡಿ. ಇಷ್ಟೆಲ್ಲ ಗೊಂದಲ ಇಟ್ಟುಕೊಂಡು ಇದನ್ನು ಜಾರಿ ಮಾಡಿದರೆ ಜೇನುಗೂಡಿಗೆ ಕೈ ಹಾಕಿದ ಹಾಗೆ ಆಗುತ್ತದೆ. ಇದರಿಂದ ಏನೂ ಪ್ರಪಂಚ ಮುಳುಗಿ ಹೋಗುವುದಿಲ್ಲ. ಸಿದ್ದರಾಮಯ್ಯ ಅರಿವು ಉಳ್ಳವರಾಗಿ ಹೀಗೆ ಮಾಡಬೇಡಿ. ಒಂದೂವರೆ ವರ್ಷಗಳ ಕಾಲ ಸಮಯ ಕೊಟ್ಟು ಮತ್ತೊಮ್ಮೆ ಸರ್ವೇ ಮಾಡಿ. ಅವಾಗ ದೇವರಾಜ ಅರಸುರಂತೆ ನಿಮ್ಮನ್ನು ನೆನಪು ಮಾಡಿಕೊಳ್ತೀವಿ. ಅದನ್ನು ಬಿಟ್ಟು ಇರುವ ವರದಿ ಜಾರಿ ಮಾಡಿ ಖಳನಾಯಕರಾಗಬೇಡಿ ಎಂದು ಸಲಹೆ ನೀಡಿದ್ದಾರೆ.