ರಾಯಚೂರು: ಜಾತಿ ಗಣತಿಯ ಅಸ್ತ್ರ, ಬ್ರಹ್ಮಾಸ್ತೃವಾಗಿ ಸಿಎಂ ಸಿದ್ದರಾಮಯ್ಯಗೆ ತಿರುಗು ಬಾಣವಾಗಲಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಲಿಂಗಸುಗೂರು ಪಟ್ಟಣದಲ್ಲಿ ನಡೆದ ಹಿಂದೂ ಸಾಮ್ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಇದು ಹಿಂದೂಗಳ ವಿರುದ್ಧ ಬರೆಯಿಸಿದ ಜಾತಿಗಣತಿ. ಈ ಜಾತಿಗಣತಿಯಲ್ಲಿ ಹಿಂದೂಗಳಿಗೆ ಅನ್ಯಾಯ ಮಾಡಿ ಅಲ್ಪಸಂಖ್ಯಾತರ ಜನಸಂಖ್ಯೆಯನ್ನು ಹೆಚ್ಚಿಗೆ ತೋರಿಸಿ ಜಾತಿಗಣತಿ ಮಾಡಿಸಿದ್ದಾರೆ. ಜಾತಿಗಣತಿ ಅಸಮರ್ಪಕವಾಗಿ ಕೂಡಿದೆ. ಇದನ್ನು ಮರುಪರಿಶೀಲನೆ ಮಾಡದಿದ್ದರೆ ಹಿಂದೂಗಳು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಸರ್ಕಾರ ಅಲ್ಪಸಂಖ್ಯಾತರ ಪರವಾಗಿದೆ. ಮುಸ್ಲಿಂ ಸಮುದಾಯದಲ್ಲಿ ಹಲವಾರು ಪಂಗಡಗಳು ಇವೆ. ಪಿಂಜಾರ, ಸಿಯಾ ಸುನ್ನಿ ಇನ್ನಿತರ ಜಾತಿಗಳು ಸೇರಿವೆ. ವೀರಶೈವ ಲಿಂಗಾಯತ, ಕುರುಬ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಿಂದೂಗಳಲ್ಲಿ ಈ ಹಲವಾರು ಜಾತಿಗಳಿವೆ. ಆದರೆ, ಸಿದ್ದರಾಮಯ್ಯ ಹಿಂದೂಗಳಿಗೆ ಅನ್ಯಾಯ ಮಾಡಿ ಮುಸ್ಲಿಂ ಸಮುದಾಯವನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಸಿದ್ದರಾಮಯ್ಯನವರು ಮಾದಿಗ – ಚಲುವಾದಿ ಜನಾಂಗಕ್ಕೆ ಅನ್ಯಾಯ ಮಾಡುತ್ತಿದ್ದಾರೆ. ಬೊಮ್ಮಾಯಿ ಸರ್ಕಾರ ಮಾಧುಸ್ವಾಮಿ ನೇತೃತ್ವದಲ್ಲಿ ಸಮಿತಿ ಮಾಡಿ ಎಸ್ಸಿ, ಎಸ್ಟಿ ಒಬಿಸಿ, 2ಡಿ, 2ಸಿ ಎಂದು ವಿಂಗಡಿಸಿ ಶಿಪಾರಸ್ಸು ಮಾಡಿತ್ತು. ಆದರೆ ಇದನ್ನು ಸಿದ್ದರಾಮಯ್ಯನವರು ಒಪ್ಪಿ ಅಂಗಿಕರಿಸಲಿಲ್ಲ. ಸಿದ್ದರಾಮಯ್ಯನವರು ಹಿಂದೂಗಳಿಗೆ ಮಾಡುತ್ತಿರುವ ವಿರೋಧ ಅಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಸೂರ್ಯ- ಚಂದ್ರ ಎಷ್ಟು ಸತ್ಯವೂ ಅಷ್ಟೇ ಸತ್ಯ ಡಿಸೆಂಬರ್ ತಿಂಗಳಲ್ಲಿ ಸಿದ್ದರಾಮಯ್ಯನವರು ರಾಜೀನಾಮೆ ಕೊಡುತ್ತಾರೆ. ಸಿದ್ದಾರಮಯ್ಯ ತಮ್ಮ ಕುರ್ಚಿ ಉಳಿಸಿಕೊಳ್ಳುವುದಕ್ಕಾಗಿ ಜಾತಿಗಣತಿ ಎಂಬ ಜೇನುಗೂಡಿಗೆ ಕೈ ಹಾಕಿದ್ದಾರೆ. ಆದರೆ, ಅದು ಉಳಿಯುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.