ಬಾಗಲಕೋಟೆ: ಮೊದಲ ಹಂತದ ಬಿಜೆಪಿ ಜನಾಕ್ರೋಶ ಯಾತ್ರೆ ಯಶಸ್ಸು ಕಂಡಿದ್ದು, ಎರಡನೇ ಹಂತದ ಜನಾಕ್ರೋಶ ಆರಂಭವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಜಿಲ್ಲೆಯ ಲೋಕಾಪುರದಲ್ಲಿ ಮಾತನಾಡಿದ ಅವರು, ಈಗಾಗಲೇ ಮೈಸೂರಿನಿಂದ ಆರಂಭವಾಗಿ ಉಡುಪಿ, ಮಂಗಳೂರುರು ಸೇರಿದಂತೆ ಆ ಭಾಗದ ಎಲ್ಲ ಜಿಲ್ಲೆಗಳಲ್ಲಿ ಜನಾಕ್ರೋಶ ಯಾತ್ರೆ ಮುಗಿದಿದೆ. ಬೆಳಗಾವಿ ಯಾತ್ರೆ ಕೂಡ ಮುಗಿದಿದೆ. ಈಗ ಬಾಗಲಕೋಟೆ- ವಿಜಯಪುರ ಜಿಲ್ಲೆಯಲ್ಲಿ ಜನಾಕ್ರೋಶ ಯಾತ್ರೆ ನಡೆಯಲಿದೆ. ನಮ್ಮ ನಿರೀಕ್ಷೆಗೂ ಮೀರಿ ಜನಾಕ್ರೋಶ ಯಾತ್ರೆಗೆ ಬೆಂಬಲ ಸಿಕ್ಕಿದೆ. ರಾಜ್ಯದ ಜನರು ನಾಳೆಯೇ ಚುನಾವಣೆ ನಡೆದರೂ ಈ ಸರ್ಕಾರವನ್ನು ಕಿತ್ತು ಎಸೆಯುತ್ತಾರೆ ಎಂದಿದ್ದಾರೆ.
ಸರ್ಕಾರ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿತ್ತು. ಆದರೆ, ಅದನ್ನು ಅವರೇ ಹುಸಿಗೊಳಿಸಿದ್ದಾರೆ. ಜನ ವಿರೋಧಿ ತಿರ್ಮಾನ, ಬೆಲೆ ಏರಿಕೆ, ಹಿಂದೂ ವಿರೋಧಿ ನೀತಿಯಿಂದ ದೇಶದಲ್ಲೇ ಇಷ್ಟು ಕಡಿಮೆ ಅವಧಿಯಲ್ಲಿ ಜನಪ್ರಿಯತೆ ಕಳೆದುಕೊಂಡ ಸರ್ಕಾರ ಅಂದ್ರೆ ಅದು ಸಿದ್ದರಾಮಯ್ಯ ಸರ್ಕಾರ. ಈ ಸರ್ಕಾರಕ್ಕೆ ಪಾಠ ಕಲಿಸಲು ಜನರು ಕಾಯುತ್ತಿದ್ದಾರೆ. ವಿಪಕ್ಷವಾಗಿ ನಾವು ಪ್ರಾಮಾಣಿಕವಾಗಿ ನಮ್ಮ ಜವಾಬ್ದಾರಿ ನಿಭಾಯಿಸಿದ್ದೇವೆ ಎಂದು ಹೇಳಿದ್ದಾರೆ.