ಚಿಕ್ಕಬಳ್ಳಾಪುರ: ವಿಪಕ್ಷಗಳ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ (Siddaramaiah) ಟಾಂಗ್ ಕೊಟ್ಟಿದ್ದಾರೆ.
ಸರ್ಕಾರದ 2 ವರ್ಷದ ಸಾಧನೆಯ ಹೆಸರಿನಲ್ಲಿ ದೇವನಹಳ್ಳಿ ತಾಲೂಕಿನ ಭೈರದೇನಹಳ್ಳಿ ಹತ್ತಿರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ಯಾರಂಟಿಗಳಿಂದ (Guarantee Scheme) ಖಜಾನೆ ಖಾಲಿ, ಪಾಪರ್ ಸರ್ಕಾರ ಎಂದು ಬಿಜೆಪಿ (BJP) ನಾಯಕರು ಟೀಕೆ ಮಾಡಿದ್ದಕ್ಕೆ ಸಿಎಂ ತಿರುಗೇಟು ನೀಡಿದ್ದಾರೆ. ಚುನಾವಣಾ ಪೂರ್ವದಲ್ಲಿ ಮಾತು ಕೊಟ್ಟಂತೆ 5 ಗ್ಯಾರಂಟಿಗಳನ್ನು ಈಡೇರಿಸಿದ್ದೇವೆ. 2 ವರ್ಷದಲ್ಲಿ 80 ಸಾವಿರ ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದೇವೆ. ಈ ವರ್ಷವೂ ಕೂಡ 50 ಸಾವಿರ ಕೋಟಿಗೂ ಹೆಚ್ಚು ಹಣ ಬಜೆಟ್ನಲ್ಲಿಟ್ಟಿದ್ದೇವೆ. ಆದರೂ ಬಿಜೆಪಿ ಸುಳ್ಳು ಹೇಳಿಕೊಂಡು ತಿರುಗಾಡುತ್ತಿದೆ. ನಾವು ಪಾಪರ್ ಆಗಿದ್ದರೆ, 1 ಸಾವಿರ ಕೋಟಿ ರೂ.ಗೂ ಅಧಿಕ ಕಾಮಗಾರಿಗಳಿಗೆ ಚಾಲನೆ ನೀಡಲು ಆಗುತ್ತಿತ್ತಾ? ಎಂದು ಪ್ರಶ್ನಿಸಿದ್ದಾರೆ.
ಕೇಂದ್ರ ಸರ್ಕಾರ ದಿನೇದಿನೇ ಬೆಲೆ ಏರಿಕೆ ಮಾಡುತ್ತಿದೆ. ಪೆಟ್ರೋಲ್, ಡೀಸೆಲ್, ಗ್ಯಾಸ್ ಮೇಲೆ ಬೆಲೆ ಏರಿಕೆ ಮಾಡಿದ್ದರು. ಬಿಜೆಪಿ ಜನಾಕ್ರೋಶ ಆರಂಭ ಮಾಡಿದ ಮೇಲೆ ಬೆಲೆ ಏರಿಕೆ ಆಗಿದ್ದು, ಬೆಲೆ ಏರಿಕೆಗೆ ನೇರ ಕಾರಣ ಕೇಂದ್ರ ಸರ್ಕಾರ ಎಂದು ಗುಡುಗಿದ್ದಾರೆ.