ಬೆಂಗಳೂರು: ಅಮೆರಿಕ ಹಾಗೂ ಇಸ್ರೇಲ್ ಜತೆಗೂಡಿ ಇರಾನ್ ಮೇಲೆ ಯುದ್ಧ ಸಾರಿವೆ. ಇರಾನ್ ಕೂಡ ಇಸ್ರೇಲ್, ಅಮೆರಿಕಕ್ಕೆ ಪ್ರತಿದಾಳಿಯ ತಿರುಗೇಟು ನೀಡಿದೆ. ಸಂಘರ್ಷ ನಿಲ್ಲುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಇದರ ಪರಿಣಾಮವು ಭಾರತದ ಷೇರು ಮಾರುಕಟ್ಟೆ ಮೇಲೆ ಗಂಭೀರವಾದ ಪರಿಣಾಮವನ್ನೇ ಬೀರಿದೆ. ಹೂಡಿಕೆದಾರರು ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾರೆ. ಇದರ ಬೆನ್ನಲ್ಲೇ, ಎಸ್ಐಪಿ ಹೂಡಿಕೆ ಪ್ರಮಾಣವೂ ತೀವ್ರವಾಗಿ ಕುಸಿದಿದೆ.
ಹೌದು, ಕಳೆದ ಜನವರಿಯಲ್ಲಿ ಎಸ್ಐಪಿ ಸ್ಟಾಪೇಜ್ ರೇಶಿಯೋ ಶೇ.75.62ರಷ್ಟು ಇದ್ದರೆ, ಫೆಬ್ರವರಿಯಲ್ಲಿ ಶೇ.74ರಷ್ಟು ಜನ ಎಸ್ಐಪಿ ಹೂಡಿಕೆ ನಿಲ್ಲಿಸಿದ್ದಾರೆ. ಷೇರು ಮಾರುಕಟ್ಟೆಯ ಕುಸಿತದಿಂದಾಗಿ ಎಸ್ಐಪಿ ಹೂಡಿಕೆದಾರರೂ ನಷ್ಟ ಅನುಭವಿಸುತ್ತಿದ್ದಾರೆ. ಇದರಿಂದಾಗಿ ಹೂಡಿಕೆಯನ್ನು ಹಿಂತೆಗೆದುಕೊಳ್ಳುತ್ತಿದ್ದಾರೆ. ಆದರೆ, ಹೀಗೆ ಎಸ್ಐಪಿ ಹೂಡಿಕೆ ನಿಲ್ಲಿಸಬೇಕೇ? ಮುಂದೆಯೂ ನಷ್ಟವಾಗಲಿದೆಯೇ ಎಂಬುದರ ಕುರಿತು ಹೂಡಿಕೆದಾರರಿಗೆ ತಜ್ಞರು ಸ್ಪಷ್ಟನೆ ನೀಡಿದ್ದಾರೆ.
“ಷೇರು ಮಾರುಕಟ್ಟೆಯ ಇತಿಹಾಸವನ್ನು ನೋಡಿದರೆ, ಏರಿಳಿತಗಳು ತುಂಬ ಸಹಜ. ಈಗಲೂ ಯುದ್ಧದ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆ ಕುಸಿದಿದೆ. ಮ್ಯೂಚುವಲ್ ಫಂಡ್ ಎಸ್ಐಪಿಗಳು ನಷ್ಟದಲ್ಲಿವೆ. ಆದರೆ, ಇಂತಹ ಸಂದರ್ಭದಲ್ಲಿ ಹೂಡಿಕೆ ನಿಲ್ಲಿಸುವುದು ಸಮಂಜಸವಾದ ತೀರ್ಮಾನವಲ್ಲ” ಎಂದು ವೆಸ್ಟೆಡ್ ಫೈನಾನ್ಸ್ ಸಹ ಸಂಸ್ಥಾಪಕ ವಿಕ್ರಮ್ ಶಾ ಮಾಹಿತಿ ನೀಡಿದ್ದಾರೆ.
“ಷೇರು ಮಾರುಕಟ್ಟೆ ತೀವ್ರವಾಗಿ ಕುಸಿದಿದೆ ಎಂದರೆ ಹೂಡಿಕೆದಾರರಿಗೆ ಹೂಡಿಕೆ ಮಾಡಲು ಒಳ್ಳೆಯ ಅವಕಾಶ ಇದೆ ಎಂದು ಅರ್ಥ. ಈಗ ಎಸ್ಐಪಿಯಲ್ಲಿ ಹೂಡಿಕೆ ಮಾಡಿದರೆ ಕಡಿಮೆ ಬೆಲೆಗೆ ಯೂನಿಟ್ ಗಳು ಲಭಿಸುತ್ತವೆ. ಮಾರುಕಟ್ಟೆಯು ಏರುಮುಖದತ್ತ ಸಾಗುತ್ತಲೇ ಹೂಡಿಕೆದಾರರಿಗೆ ಹೆಚ್ಚಿನ ಲಾಭವಾಗಲಿದೆ. ಹಾಗಾಗಿ, ಮಾರುಕಟ್ಟೆ ಇಳಿಕೆಯನ್ನು ಕಂಡು ಎಸ್ಐಪಿ ಹೂಡಿಕೆ ನಿಲ್ಲಿಸುವುದು ಒಳ್ಳೆಯ ತೀರ್ಮಾನವಲ್ಲ” ಎಂದು ಅವರು ಲೈವ್ ಮಿಂಟ್ ಸುದ್ದಿಸಂಸ್ಥೆಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಭಾರತಕ್ಕೆ ಲಗ್ಗೆ ಇಡಲಿವೆ ವಿವೋ Y21 5G ಮತ್ತು Y11 5G : ಬೆಲೆ ಮತ್ತು ವೈಶಿಷ್ಟ್ಯಗಳ ಮಾಹಿತಿ ಸೋರಿಕೆ!



















