ಉತ್ತರ ಕನ್ನಡ: ಅಂಕೋಲಾ (Ankola) ತಾಲೂಕಿನ ಶಿರೂರು ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿದು (Shirur landslide) 11 ಜನ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮತೊಬ್ಬರ ಶವ ಸಿಕ್ಕಿದೆ.
ಈಗಾಗಲೇ 8 ಜನರ ಮೃತದೇಹ ಪತ್ತೆಯಾಗಿದ್ದು, ಇನ್ನೂ ಮೂವರಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಶಿರೂರು ಗುಡ್ಡ ಕುಸಿತದಿಂದ 25 ಕಿಮೀ ದೂರದಲ್ಲಿನ ಹೊನ್ನಾವರ ಸಮುದ್ರದಲ್ಲಿ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಶವ ಪತ್ತೆಯಾಗಿದೆ. ಈ ಶವ ಗಂಗಾವಳಿ ನದಿಯಲ್ಲಿ ಕೊಚ್ಚಿ ಹೋದ ಲಾರಿ ಚಾಲಕ ಅರ್ಜುನ್ (30) ಅವರದ್ದು ಎಂಬ ಶಂಕೆ ಇದೆ. ಆದರೆ, ಮೃತದೇಹ ಯಾರದ್ದು ಎಂದು ಇನ್ನೂ ಖಚಿತವಾಗಿಲ್ಲ.
ಸದ್ಯ ಕರಾವಳಿ ಪೊಲೀಸರು ಮೃತದೇಹವನ್ನು ದಡಕ್ಕೆ ತಂದು, ಡಿಎನ್ ಎ ಪರೀಕ್ಷೆಗೆ ಕಳುಹಿಸಿದ್ದಾರೆ. ಡಿಎನ್ ಎ ಪರೀಕ್ಷೆಗಾಗಿ ಅರ್ಜನ್ ಸಹೋದರ ಅಭಿಜಿತ್ ನ ಮಾದರಿಗಳನ್ನು ತೆಗೆದುಕೊಳ್ಳಲಾಗಿದೆ. ಜುಲೈ 16 ರಂದು ಸಂಭಿವಿಸಿದ್ದ ಗುಡ್ಡ ಭೂಕುಸಿತದಲ್ಲಿ ಕೇರಳದ ಕೋಝಿಕ್ಕೋಡ್ ಮೂಲದ ಲಾರಿ ಚಾಲಕ ಅರ್ಜುನ್ ನಾಪತ್ತೆಯಾಗಿದ್ದಾರೆ. ಅರ್ಜುನ್ ಲಾರಿ ಸಮೇತ ಗಂಗಾವಳಿ ನದಿಯಲ್ಲಿ ಕೊಚ್ಚಿ ಹೋಗಿರುವ ಸಾಧ್ಯತೆ ಇದೆ. ಹೀಗಾಗಿ ಇನ್ನೂ ಹುಡುಕಾಟ ನಡೆಸಲಾಗುತ್ತಿದೆ. ಸತತ 13 ದಿನಗಳ ಕಾಲ ಹುಡುಕಾಟ ನಡೆಸಿದರೂ ಅರ್ಜುನ್ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಪ್ರತಿಕೂಲ ಹವಾಮಾನದಿಂದಾಗಿ ಶೋಧ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು.
ಭೂಕುಸಿತದಿಂದ ನದಿಯಲ್ಲಿ ಶೇಖರಣೆಯಾದ ಮಣ್ಣಿನಡಿ ಹೂತು ಹೋಗಿದ್ದ ಲಾರಿಯೊಳಗೆ ಅರ್ಜುನ್ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ವಿವಿಧ ಸಾಧನಗಳನ್ನು ಬಳಸಿ ಶೋಧ ನಡೆಸಿದಾಗ ನದಿಪಾತ್ರದಲ್ಲಿ ಯಾವುದೇ ದೇಹ ಪತ್ತೆಯಾಗಿಲ್ಲ. ಗಂಗಾವಳಿ ನದಿಯಲ್ಲಿ ಹೆಚ್ಚಿನ ನೀರಿನ ಪ್ರವಾಹ ಮತ್ತು ನದಿಯ ಆಳವು ರಕ್ಷಣಾ ತಂಡಗಳಿಗೆ ಪ್ರಮುಖ ಸವಾಲಾಗಿತ್ತು.