ಪ್ರಯಾಗರಾಜ್: ಅಲಾಹಾಬಾದ್ ಹೈಕೋರ್ಟ್, ಅತ್ಯಾಚಾರ ಪ್ರಕರಣದ ವಿಚಾರಣೆಯ ವೇಳೆ ಸಂತ್ರಸ್ತ ಮಹಿಳೆಯೇ ತನಗೆ ತೊಂದರೆ ಆಹ್ವಾನಿಸಿಕೊಂಡವಳು. ಆಕೆಯ ಮೇಲಿನ ಅತ್ಯಾಚಾರಕ್ಕೆ ಆಕೆಯೇ ಕಾರಣ ಎಂದು ಹೇಳಿಕೆ ನೀಡಿದೆ. ಈ ಪ್ರಕರಣವು ನಿಶ್ಚಲ್ ಚಂದಕ್ ಮತ್ತು ಉತ್ತರಪ್ರದೇಶ ಸರ್ಕಾರ ನಡುವೆ ಇದ್ದು, ನ್ಯಾಯಮೂರ್ತಿ ಸಂಜಯ್ ಕುಮಾರ್ ಸಿಂಗ್ ಅವರು ಆರೋಪಿಗೆ ಜಾಮೀನು ನೀಡುವಾಗ ಈ ವಿವಾದಾಸ್ಪದ ತೀರ್ಪು ಪ್ರಕಟಿಸಿದ್ದಾರೆ.
ಪ್ರಕರಣವು ದೆಹಲಿಯ ಹೌಜ್ ಖಾಸ್ನಲ್ಲಿರುವ ಬಾರ್ ಒಂದರಲ್ಲಿ ಆರಂಭಗೊಳ್ಳುತ್ತದೆ. ನೋಯ್ಡಾದ ಒಂದು ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿದ್ಯಾರ್ಥಿನಿಯಾಗಿದ್ದ ಸಂತ್ರಸ್ತೆ ಮೂವರು ಸ್ನೇಹಿತೆಯರರೊಂದಿಗೆ ಅಲ್ಲಿಗೆ ಹೋಗಿದ್ದಳು. ಈ ಸಂದರ್ಭದಲ್ಲಿ ಆರೋಪಿ ನಿಶ್ಚಲ್ ಚಂದಕ್ ಸೇರಿದಂತೆ ಈಗಾಗಲೇ ಪರಿಚಯವಿದ್ದ ಕೆಲವು ಪುರುಷರನ್ನು ಭೇಟಿಯಾಗಿದ್ದಳು. ಆರೋಪಿ ಮದ್ಯಪಾನದ ಅಮಲದಲ್ಲಿದ್ದು, ಆಕೆಯನ್ನು ತನ್ನ ಜೊತೆಗೆ ಬರಲು ಪದೇ ಪದೇ ಒತ್ತಾಯಿಸಿದ್ದ.
ಒಪ್ಪಿಗೆಯೊಂದಿಗೆ ತಾನು “ವಿಶ್ರಾಂತಿ ಪಡೆಯಲು” ಆತನ ಮನೆಗೆ ಹೋಗಿದ್ದಳು. ಮಾರ್ಗ ಮಧ್ಯದಲ್ಲಿಯೇ ಆರೋಪಿ ಅನುಚಿತವಾಗಿ ಆಕೆಯನ್ನು ಸ್ಪರ್ಶಿಸುತ್ತಿದ್ದ. ಅಲ್ಲದೆ, ನೋಯ್ಡಾಕ್ಕೆ ಕರೆದೊಯ್ಯದೆ, ಗುರುಗ್ರಾಮದಲ್ಲಿರುವ ತನ್ನ ಸಂಬಂಧಿಕರ ಫ್ಲಾಟ್ಗೆ ಕರೆದೊಯ್ದು ಎರಡು ಬಾರಿ ಅತ್ಯಾಚಾರ ಎಸಗಿದ ಎಂದು ಆಕೆ ಪೊಲೀಸರಿಗೆ ದೂರು ದಾಖಲಿಸಿದ್ದಳು. ಆರೋಪಿಯನ್ನು ಡಿಸೆಂಬರ್ 11, 2024ರಂದು ಬಂಧಿಸಲಾಗಿತ್ತು.

ವರದಿಯಲ್ಲಿ ಏನಿತ್ತು?
ವೈದ್ಯಕೀಯ ಪರೀಕ್ಷೆಯಲ್ಲಿ ಸಂತ್ರಸ್ತೆಯ ಮೇಲೆ ಅತ್ಯಾಚಾರ ನಡೆದಿರುವುದು ದೃಢಪಟ್ಟಿದ್ದರೂ, ವೈದ್ಯರು ಒತ್ತಾಯದ ಲೈಂಗಿಕ ದೌರ್ಜನ್ಯದ ಬಗ್ಗೆ ಯಾವುದೇ ಅಭಿಪ್ರಾಯ ನೀಡಿರಲಿಲ್ಲ. ಆರೋಪಿ ಜಾಮೀನು ಅರ್ಜಿ ಸಲ್ಲಿಸಿ ಆಕೆಯ ಆರೋಪಗಳನ್ನು ನಿರಾಕರಿಸಿದ್ದು, ಆಕೆಯೇ ನೆರವಿಗೆ ಕೋರಿದ್ದಳು ಎಂದು ವಾದಿಸಿದ್ದ. ತಮ್ಮಿಬ್ಬರದು ಸಮ್ಮತಿಯ ಲೈಂಗಿಕತೆ ಎಂದು ಆರೋಪಿ ಹೇಳಿದ್ದ.
ನ್ಯಾಯಾಲಯದ ತೀರ್ಮಾನ:
ನ್ಯಾಯಮೂರ್ತಿ ಸಂಜಯ್ ಕುಮಾರ್ ಸಿಂಗ್ ಅವರು ತೀರ್ಮಾನವನ್ನು ಘೋಷಿಸುವಾಗ, “ಒಂದು ವೇಳೆ ಸಂತ್ರಸ್ತೆಯ ಆರೋಪ ನಿಜವೆಂದು ಒಪ್ಪಿಕೊಂಡರೂ, ಎದುರಾದ ಅಪಾಯಕ್ಕೆ ಆಕೆಯೇ ಕಾರಣ ಎಂದು ತೀರ್ಮಾನಿಸಬಹುದು. ಆಕೆಯೂ ತನ್ನ ಹೇಳಿಕೆಯಲ್ಲಿ ಇದೇ ರೀತಿ ನಿಲುವು ತೆಗೆದುಕೊಂಡಿದ್ದಾಳೆ. ವೈದ್ಯಕೀಯ ವರದಿಯಲ್ಲಿ ಲೈಂಗಿಕತೆಯ ಲಕ್ಷಣಗಳಿದ್ದರೂ ದೌರ್ಜನ್ಯದ ಬಗ್ಗೆ ದೃಢೀಕರಣ ಇಲ್ಲ” ಎಂದು ಅಭಿಪ್ರಾಯಪಟ್ಟಿದ್ದಾರೆ.
“ಆಕೆ ಸ್ವತಃ ಅಪಾಯವನ್ನು ಆಹ್ವಾನಿಸಿಕೊಂಡಳು ಮತ್ತು ಕೃತ್ಯಕ್ಕೆ ತಾನೂ ಕಾರಣಳಾಗಿದ್ದಾಳೆ ಎಂದು ಸಹ ತೀರ್ಮಾನಿಸಬಹುದು” ಎಂದು ಹೇಳಿದ್ದರು.