ಬೆಂಗಳೂರು: ಪಂಚೆ ಹಾಕಿಕೊಂಡು ಮಾಲ್ ಗೆ ಬಿಂದಿದ್ದ ರೈತ ವ್ಯಕ್ತಿಗೆ ಅವಮಾನ ಮಾಡಿರುವ ಜಿ.ಟಿ ಮಾಲ್ (GT Mall) ನ್ನು 7 ದಿನಗಳ ಕಾಲ ಮುಚ್ಚಿಸುತ್ತೇವೆ ಎಂದು ಸಚಿವ ಬೈರತಿ ಸುರೇಶ್ (Byrathi Suresh) ಘೋಷಿಸಿದ್ದಾರೆ.
ವಿಧಾನಸಭೆಯಲ್ಲಿ ನಡೆದ ಚರ್ಚೆಗೆ ಸರ್ಕಾರದ ಪರವಾಗಿ ಉತ್ತರಿಸಿದ ಅವರು, ಪಂಚೆ ಹಾಕಿಕೊಂಡು ಬಂದಿದ್ದಕ್ಕೆ ಮಾಲ್ ಸಿಬ್ಬಂದಿ, ಒಳಗೆ ಬಿಡದೆ ಅವಮಾನಿಸಿದೆ. ಹೀಗಾಗಿಯೇ ಜಿ.ಟಿ ಮಾಲ್ ಬಂದ್ ಮಾಡಲು ನಿರ್ಧರಿಸಲಾಗಿದೆ. ಈಗಾಗಲೇ ಬಿಬಿಎಂಪಿ ಆಯುಕ್ತರ ಹತ್ತಿರ ಮಾತನಾಡಿದ್ದೇವೆ. ಕಾನೂನಿನಲ್ಲಿ ಅವಕಾಶ ಇದೆ. ಸರ್ಕಾರದ ಕ್ರಮ ಕೈಗೊಳ್ಳಬಹುದು. ಹೀಗಾಗಿ 7 ದಿನ ಮಾಲ್ ಮುಚ್ಚಿಸಿ, ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ವಿಧಾನಸಭೆಯಲ್ಲಿ ಸ್ಪೀಕರ್ ಯು.ಟಿ.ಖಾದರ್ ಈ ವಿಷಯ ಪ್ರಸ್ತಾಪಿಸಿ ಗರಂ ಆಗಿದ್ದರು. ಅವನು ಎಷ್ಟೇ ದೊಡ್ಡವನು ಇರಲಿ. ಅವನಿಗೆ ಏನು ಅನ್ನೋದನ್ನು ತೋರಿಸಬೇಕು. ಅವಮಾನ ಮಾಡಿದ್ದನ್ನು ಖಂಡಿಸಬೇಕು. ಸರ್ಕಾರ ಕಠಿಣ ಕ್ರಮ ಜರುಗಿಸಬೇಕು. ಎಲ್ಲಾ ಮಾಲ್ ಗಳಿಗೂ ಒಂದೇ ರೂಲ್ಸ್ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಸರ್ಕಾರದಿಂದ ಒಂದು ಆದೇಶ ಹೊರಡಿಸಲಿ. ಆ ಮಾಲ್ಗೆ ವಾರಗಳ ಕಾಲ ಪವರ್ ಕಟ್ ಮಾಡಲಿ ಎಂದು ಶಾಸಕ ಲಕ್ಷ್ಮಣ ಸವದಿ ಆಗ್ರಹಿಸಿದರೆ, ರೈತನಿಗೆ ಅವಮಾನ ಮಾಡಿದ ಆ ಮಾಲ್ ನ್ನು ಮುಚ್ಚಬೇಕು ಎಂದು ಶಾಸಕ ಪ್ರಕಾಶ್ ಕೋಳಿವಾಡ ಒತ್ತಾಯಿಸಿದರು.
ರಾಜ್ಯದ ಎಲ್ಲಾ ಕ್ಲಬ್ಗಳು, ಮಾಲ್ಗಳಲ್ಲಿ ಒಂದೇ ರೂಲ್ಸ್ ತರಬೇಕು ಎಂದು ಆಗ್ರಹಿಸಲಾಯಿತು. ಆನಂತರ ಸರ್ಕಾರದ ಪರವಾಗಿ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ 7 ದಿನಗಳ ಕಾಲ ಮಾಲ್ ಮುಚ್ಚುವ ಘೋಷಿಸಿದರು.