ಬೆಂಗಳೂರು: ರಾಜ್ಯ ಬಿಜೆಪಿ ಘಟಕದಿಂದ ರಾಜ್ಯ ಸರ್ಕಾರದ ವಿರುದ್ಧ ಜನಾಕ್ರೋಶ ಯಾತ್ರೆ ನಡೆಯುತ್ತಿದ್ದು, ಎರಡನೇ ಹಂತದ ಯಾತ್ರೆ ಇಂದಿನಿಂದ ಆರಂಭವಾಗಿದೆ.
ಈಗಾಗಲೇ ಮೊದಲ ಹಂತದ ಜನಾಕ್ರೋಶ ಯಾತ್ರೆ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ನಡೆದಿದೆ. ಈಗ ಇಂದಿನಿಂದ ಎರಡನೇ ಹಂತದ ಯಾತ್ರೆ ಆರಂಭವಾಗಲಿದೆ. ಮೊದಲ ಹಂತದ ಜನಾಕ್ರೋಶ ಯಾತ್ರೆಗೆ ಯಶಸ್ಸು ಸಿಕ್ಕಿದೆ ಎಂದು ವಿಜಯೇಂದ್ರ ಹೈಕಮಾಂಡ್ ನಾಯಕರಿಗೆ ವರದಿ ಕಳುಹಿಸಿದ್ದಾರೆ.
ಹಳೆಯ ಮೈಸೂರು, ಕರಾವಳಿ ಹಾಗೂ ಮಲೆನಾಡಿನ ಭಾಗಗಳಲ್ಲಿ ವಿಜಯೇಂದ್ರ ಮೊದಲ ಹಂತದ ಯಾತ್ರೆಯನ್ನು ಮುಗಿಸಿದ್ದಾರೆ. ಹಳೆಯ ಮೈಸೂರು ಭಾಗದಲ್ಲಿ ನಾವು ಸ್ವಲ್ಪ ಪ್ರಯತ್ನ ಹಾಕಿದರೆ, ಗೆಲುವು ಶತಸಿದ್ಧ. ಇದರಲ್ಲಿ ಯಾವುದೇ ಅನುಮಾನ ಬೇಡ. ಮೈಸೂರು, ಚಾಮರಾಜನಗರ, ಕೊಡಗು, ಮಂಡ್ಯ, ಹಾಸನ, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಗಳಲ್ಲಿ ನಾವು ಕೂಡ ಗಟ್ಟಿಯಿದ್ದೇವೆ. ಮುಂದಿನ ಚುನಾವಣೆಯಲ್ಲಿ ಸ್ವಲ್ಪ ಪ್ರಯತ್ನ ಹಾಕಿದರೆ, ಹಳೆಯ ಮೈಸೂರು ಭಾಗದಲ್ಲಿ ಗೆಲ್ಲಬಹುದು ಎಂದು ವರದಿಯಲ್ಲಿ ವಿಜಯೇಂದ್ರ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.
ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ನಾವು ಗಟ್ಟಿಯಿದ್ದೇವೆ. ಅದರಲ್ಲಿ ಅನುಮಾನ ಇಲ್ಲ. ಮುಂದೆ ಎರಡ್ಮೂರು ಬಾರಿ ಸಂಘಟನೆ ಮಾಡಿದರೆ ಪಕ್ಷದ ಅಭ್ಯರ್ಥಿಗಳನ್ನು ಶಾಸಕರನ್ನಾಗಿಸಬಹುದು. ನಮ್ಮ ಕಾರ್ಯಕರ್ತರನ್ನು ಸಂಘಟಿಸಬೇಕಷ್ಟೇ. ಹೀಗೆ ಮೊದಲ ಹಂತದಲ್ಲಿ ಜನಾಕ್ರೋಶ ಯಾತ್ರೆ ಯಶಸ್ವಿಯಾಗಿದೆ. ಮುಂದೆ ಬಿಜೆಪಿ ಕಷ್ಟ ಸಾಧ್ಯ ಎನ್ನುವ ಭಾಗಗಳಲ್ಲಿ ಕೂಡ ನಾವು ಕಮಲ ಅರಳಿಸುತ್ತೇವೆ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.