ಬೆಂಗಳೂರು: ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗಗಗಳ ಕಲ್ಯಾಣ ಇಲಾಖೆಯು ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವ ದೃಷ್ಟಿಯಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಕೆಯ ದಿನಾಂಕವನ್ನು ಜೂನ್ 30ಕ್ಕೆ ವಿಸ್ತರಣೆ ಮಾಡಲಾಗಿದ್ದು, ಇದುವರೆಗೆ ಅರ್ಜಿ ಸಲ್ಲಿಸದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ಮೂಲಕ ಸ್ಕಾಲರ್ ಶಿಪ್ ಪಡೆಯಬಹುದಾಗಿದೆ.
ಅಭ್ಯರ್ಥಿಗಳು https://ssp.postmatric.karnataka.gov.in/ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ವಿದ್ಯಾರ್ಥಿಯ ಆಧಾರ್ ಸಂಖ್ಯೆ, ಆಧಾರ್ ಕಾರ್ಡ್ ಗೆ ಲಿಂಕ್ ಇರುವ ಮೊಬೈಲ್ ನಂಬರ್, ಇ-ಮೇಲ್ ಐಡಿ, ವಿದ್ಯಾರ್ಥಿಯ ಹೆಸರಿನಲ್ಲಿ ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಹಾಸ್ಟೆಲ್ ನಲ್ಲಿ ಇದ್ದಲ್ಲಿ ಹಾಸ್ಟೆಲ್ ವಿವರ, ಕಾಲೇಜು ದಾಖಲಾತಿ ಪ್ರಮಾಣ ಪತ್ರ ಮತ್ತು ಕಾಲೇಜು ನೋಂದಣಿ ಸಂಖ್ಯೆ ಹಾಗೂ ಕಾಲೇಜು ಶುಲ್ಕ ರಶೀದಿ ಸೇರಿ ಹಲವು ದಾಖಲೆಗಳನ್ನು ಒದಗಿಸಬೇಕು.
ನಿಯಮಗಳೇನು?
- ಕರ್ನಾಟಕದ ಕಾಯಂ ನಿವಾಸಿಯಾಗಿರಬೇಕು
- ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳ ಅಧೀನಕ್ಕೆ ಒಳಪಡುವ, ಸಂಸ್ಥೆಗಳಲ್ಲಿ ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಾಗಿರಬೇಕು.
- ಪೋಷಕರ ಕುಟುಂಬದ, ಒಟ್ಟು ವಾರ್ಷಿಕ ವರಮಾನ ಪ್ರವರ್ಗ-1 ವಿದ್ಯಾರ್ಥಿಗಳಿಗೆ 2.5 ಲಕ್ಷ ರೂ. ಮಿತಿಯೊಳಗೆ ಇರಬೇಕು. ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಪೋಷಕರ ಕುಟುಂಬದ ಒಟ್ಟು ವಾರ್ಷಿಕ ವರಮಾನ 1 ಲಕ್ಷ ರೂ. ಮಿತಿಯೊಳಗೆ ಇರಬೇಕು.
- ಪಿಯುಸಿ, ಡಿಪ್ಲೋಮಾ, ಪದವಿ, ಸ್ನಾತಕೋತ್ತರ ಪದವಿ, ನರ್ಸಿಂಗ್ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
- ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್-ನಂತರದ ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿ ಅಥವಾ ಕೇಂದ್ರ ಪುರಸ್ಕೃತ ಮೆಟ್ರಿಕ್-ನಂತರದ ವಿದ್ಯಾರ್ಥಿವೇತನ ಕಾರ್ಯಕ್ರಮಗಳಡಿಯಲ್ಲಿ ಯಾವುದಾದರೂ ಒಂದು ಯೋಜನೆಯಡಿ ಮಾತ್ರ ಫಲಾನುಭವಿಯಾಗಲು ಅರ್ಹರು.