ಬೆಂಗಳೂರು | ಇಂಡಿಯಾ ಎಕೊನಾಮಿಕ್ ಹಬ್ ವತಿಯಿಂದ ಕೊಡಮಾಡುವ ‘ಸಾರ್ಥಕ್ ನಾರಿ ಅವಾರ್ಡ್ 2025’ರ ಗೌರವಕ್ಕೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಅವರು ಭಾಜನರಾಗಿದ್ದಾರೆ.

ನಿನ್ನೆ ಬೆಂಗಳೂರಿನ ಯಶವಂತಪುರದ ತಾಜ್ ಹೋಟೆಲ್ನಲ್ಲಿ ಈ ಅದ್ದೂರಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆದಿದೆ. ಮಹಿಳಾ ಹಕ್ಕುಗಳು, ಸಬಲೀಕರಣ ಮತ್ತು ಸಾಮಾಜಿಕ ನ್ಯಾಯ, ಆಡಳಿತ ಕ್ಷೇತ್ರದಲ್ಲಿ ಡಾ. ನಾಗಲಕ್ಷ್ಮೀ ಚೌಧರಿ ಅವರು ಮಾಡಿದ ನಿರಂತರ ಸೇವೆ, ನಿಷ್ಠೆ ಮತ್ತು ಅವರ ದೃಢ ನಾಯಕತ್ವವು ರಾಜ್ಯ ಮಾತ್ರವಲ್ಲದೆ ರಾಷ್ಟ್ರಮಟ್ಟದಲ್ಲೂ ಮೆಚ್ಚುಗೆ ಪಡೆದಿದ್ದು, ಅನೇಕ ಮಹಿಳೆಯರ ಬದುಕಿನಲ್ಲಿ ಆಶಾಕಿರಣವಾಗಿರುವ ಅವರ ಸಾಧನೆಯನ್ನು ವಿಶೇಷವಾಗಿ ಗೌರವಿಸಲಾಗಿದೆ.

ಈ ಬಗ್ಗೆ ಡಾ. ನಾಗಲಕ್ಷ್ಮೀ ಚೌಧರಿ ಅವರು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಇಂಡಿಯಾ ಎಕೊನಾಮಿಕ್ ಹಬ್ ವತಿಯಿಂದ ಕೊಡಮಾಡುವ ‘ಸಾರ್ಥಕ್ ನಾರಿ ಅವಾರ್ಡ್ 2025’ ಗೌರವಕ್ಕೆ ಪಾತ್ರಳಾಗಿದ್ದು ಸಂತಸ ನೀಡಿದೆ. ದೌರ್ಜನ್ಯದ ವಿರುದ್ಧ ಹೋರಾಡುವ, ಹಕ್ಕುಗಳ ಪ್ರತಿಪಾದನೆಯ ಮೂಲಕ ಸಮಾಜದಲ್ಲಿ ಅರ್ಥಪೂರ್ಣ ಬದಲಾವಣೆಯನ್ನು ತರುವ ಪ್ರಯತ್ನದಲ್ಲಿರುವ ಪ್ರತಿಯೊಬ್ಬ ಮಹಿಳೆಗೆ ಈ ಪ್ರಶಸ್ತಿಯನ್ನು ಸಮರ್ಪಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ : ಉಡುಪಿ : ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾಗಿ ಜ್ಯೋತಿ ಉದಯ್ ಪೂಜಾರಿ ಆಯ್ಕೆ



















