ಸಂಭ್ರಮದ ಬಕ್ರೀದ್ ಹಬ್ಬದ ದಿನದಂದೇ ಉತ್ತರ ಪ್ರದೇಶದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ದೇವಾರಿಯಾ ಜಿಲ್ಲೆಯ ಉಧೋಪುರ ಗ್ರಾಮದಲ್ಲಿ ನಮಾಜ್ ಬಳಿಕ ಮುಸ್ಲಿಂ ಧರ್ಮಾಭಿಮಾನಿಯೊಬ್ಬ ಕತ್ತು ಸೀಳಿಕೊಂಡು ದೇಹತ್ಯಾಗ ಮಾಡಿದ್ದಾನೆ.
ಬಕ್ರೀದ್ ಹಬ್ಬದ ಪ್ರಯುಕ್ತ ಇಶ್ ಮೊಹ್ಮದ್ ಎಂಬಾತ ತನ್ನ ಮನೆಯಲ್ಲಿ ನಿನ್ನೆ ಪ್ರಾರ್ಥನೆ ಸಲ್ಲಿಸಿದ್ದಾನೆ. ಬಳಿಕ ಬಲಿದಾನವಾಗಿ ತನ್ನ ಕತ್ತನ್ನು ತಾನೇ ಸೀಳಿಕೊಂಡಿದ್ದಾನೆ. ಆಗ ರಕ್ತ ಮಡುವಿನಲ್ಲಿ ಬಿದ್ದಿದ್ದ ಇಶ್ ಮೊಹ್ಮದ್ನನ್ನ ಗೋರಖ್ಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಿಸದೆ ಸಂಜೆ ವೇಳೆಗೆ ಇಹಲೋಕ ತ್ಯಜಿಸಿದ್ದಾರೆ.
60 ವರ್ಷದ ಮೊಹ್ಮದ್ ಕತ್ತು ಕೊಯ್ದುಕೊಳ್ಳುವ ಮುನ್ನ ಪತ್ರವೊಂದನ್ನ ಬರೆದಿದ್ದಾರೆ. ಅದರಲ್ಲಿ ʻಜನರು ಮೇಕೆಗಳನ್ನು ಮಕ್ಕಳಂತೆ ಸಾಕಿ-ಸಲಹುತ್ತಾರೆ. ಬಳಿಕ ಅವುಗಳನ್ನ ಬಲಿ ಕೊಡುತ್ತಾರೆ. ಆ ಪ್ರಾಣಿಗಳು ಕೂಡ ನಮ್ಮಂತೆ ಜೀವಿಗಳುʼ ಅಂತಾ ನೋವು ತೋಡಿಕೊಂಡಿದ್ದಾರೆ.
ʻನನ್ನನ್ನ ಯಾರೂ ಸಾಯಿಸಿಲ್ಲ. ನನ್ನ ಸಾವಿಗೆ ಭಯಪಡಬೇಡಿ. ಅಲ್ಲಾನ ಹೆಸರಿನಲ್ಲಿ ದೇಹ ತ್ಯಾಗ ಮಾಡುತ್ತಿದ್ದೇನೆʼ ಅಂತಾ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇನ್ನು ಪತಿ ಇಶಾ ಮೊಹ್ದದ್ ಸಾವಿನ ಬಗ್ಗೆ ಪತ್ನಿ ಹಜ್ರಾ ಖಾತೂನ್ ಮಾತನಾಡಿದ್ದಾರೆ. ಧರ್ಮನಿಷ್ಠ ಮುಸ್ಲಿಮನಾಗಿದ್ದ ಪತಿ, ಸ್ಥಳೀಯ ಸುಲ್ತಾನ್ ಸೈಯದ್ ಮಕ್ದೂಮ್ ಅಶ್ರಫ್ ಷಾ ಅವರ ಸಮಾಧಿಗೆ ಆಗಾಗ ಭೇಟಿ ನೀಡುತ್ತಿದ್ದರು. ನಿನ್ನೆ ಬಕ್ರೀದ್ ಹಬ್ಬದ ದಿನವೇ ಹೀಗೆ ಮಾಡಿಕೊಂಡಿದ್ದಾರೆ ಅಂತಾ ನೊಂದು ನಡಿದಿದ್ದಾರೆ. ಪೊಲೀಸರ ಕೂಡ ಇಶ್ ಮೊಹ್ಮದ್ ಸಾವಿನ ಬಗ್ಗೆ ಮಾಹಿತಿ ನೀಡಿದ್ದಾರೆ. ಅತಿಯಾದ ರಕ್ತಸ್ರಾವದಿಂದ ಮೊಹ್ಮದ್ ಉಸಿರು ಚೆಲ್ಲಿದ್ದಾನೆ ಅಂತಾ ತಿಳಿಸಿದ್ದಾರೆ.