ಕಲಬುರಗಿ: ಒಂದು ತಿಂಗಳಿನಿಂದ ದೇಶದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಚಿತ್ತಾಪುರ ಆರ್ಎಸ್ಎಸ್ ಪಥಸಂಚಲನ ಕೊನೆಗೂ ಇಂದು ಭಾನುವಾರ ಯಶಸ್ವಿಯಾಗಿ ನಡೆದಿದೆ. ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತವರಿನಲ್ಲಿ ಭಗವಾಧ್ವಜ ಹಾರಿಸಿ ಆರ್ಎಸ್ಎಸ್ ಕಾರ್ಯಕರ್ತರು ಹೆಜ್ಜೆ ಹಾಕಿದರು.
ಚಿತ್ತಾಪುರದ ಬಜಾಜ್ ಕಲ್ಯಾಣ ಮಂಟಪದಿಂದ ಆರಂಭವಾಗಿ ಅಂಬೇಡ್ಕರ್ ಸರ್ಕಲ್, ಬಸವ ಆಸ್ಪತ್ರೆ, ಎಚ್ಡಿಎಫ್ಸಿ ಬ್ಯಾಂಕ್ ರಸ್ತೆ, ಬಸವೇಶ್ವರ ಸರ್ಕಲ್ ಮೂಲಕ ಸಾಗಿ ಬಜಾಜ್ ಕಲ್ಯಾಣ ಮಂಟಪದಲ್ಲಿ ಮುಕ್ತಾಯವಾಯಿತು. ಹೈಕೋರ್ಟ್ ಆದೇಶದಂತೆ 300 ಜನ ಗಣವೇಶಧಾರಿಗಳು ಹಾಗೂ 50 ಜನ ಬ್ಯಾಂಡ್ ವಾದಕರಿಗೆ ಮಾತ್ರ ಭಾಗಿಯಾಗಲು ಅವಕಾಶ ನೀಡಲಾಗಿತ್ತು.
ಆರ್ಎಸ್ಎಸ್ 100 ವರ್ಷದ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ಮಹಿಳೆಯರು, ಮಕ್ಕಳು, ಸಾರ್ವಜನಿಕರು ರಸ್ತೆಯ ಎರಡೂ ಬದಿಯಲ್ಲಿ ನಿಂತು ಪಥಸಂಚಲನದಲ್ಲಿ ಭಾಗಿಯಾದ ಗಣವೇಷಧಾರಿಗಳ ಮೇಲೆ ಹೂವಿನ ಮಳೆ ಸುರಿಸುವ ಮೂಲಕ ಭವ್ಯ ಸ್ವಾಗತ ನೀಡಿದ್ದಾರೆ. ಮಧ್ಯಾಹ್ನ 3:45ಕ್ಕೆ ಆರಂಭವಾದ ಪಥ ಸಂಚಲನ 4:22ಕ್ಕೆ ಮುಕ್ತಾಯವಾಯಿತು. ಸರಿಸುಮಾರು 47 ನಿಮಿಷಗಳ ಕಾಲ ಒಟ್ಟು 1.25 ಕಿ.ಮೀ ಪಥಸಂಚಲನ ನಡೆಯಿತು.
ಪಥಸಂಚಲನ ನಡೆಯುವ 1.25 ಕಿ.ಮೀ. ಸಾಗುವ ದಾರಿಯಲ್ಲಿ ಪೊಲೀಸರು ಬಿಗಿ ಭದ್ರತೆ ಕಲ್ಪಿಸಿದ್ದರು. ಕಲಬುರಗಿ ಎಸ್ಪಿ ಅಡ್ಡೂರು ಶ್ರೀನಿವಾಸಲು ನೇತೃತ್ವದಲ್ಲಿ ಪೊಲೀಸ್ ಇನ್ಸ್ಪೆಕ್ಟರ್, ಕೆಎಸ್ಆರ್ಪಿ ಡಿಎಆರ್ ತುಕಡಿ ಸೇರಿದಂತೆ 650ಜನ ಪೋಲಿಸರು, 250ಜನ ಹೋಮ್ ಗಾರ್ಡ್, ನಿಯೋಜನೆ ಮಾಡಲಾಗಿತ್ತು.
ಪಥಸಂಚಲನ ನಡೆಯುವ ಮಾರ್ಗದಲ್ಲಿ ಪುರಸಭೆಯಿಂದ 12 ಹಾಗೂ ಪೋಲಿಸ್ ಇಲಾಖೆಯಿಂದ 44 ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿತ್ತು. 5 ಡ್ರೋಣ್ ಕ್ಯಾಮೆರಾ ಮೂಲಕ ಜನರ ಚಲನವಲನದ ಮೇಲು ಖಾಕಿ ಪಡೆ ಹದ್ದಿನ ಕಣ್ಣಿಟ್ಟಿತ್ತು. ಪಥ ಸಂಚಲನ ನಡೆಯುವ ಮಾರ್ಗದಲ್ಲಿ ಒಟ್ಟು 200 ಧ್ವಜ ಹಾಗೂ ಬಂಟಿಂಗ್, ಪ್ಲೆಕ್ಸ್, ಕಟ್ಟಲು ಪುರಸಭೆಯಿಂದ ಅನುಮತಿ ನೀಡಲಾಗಿತ್ತು.
ಇದನ್ನೂ ಓದಿ: ನಮ್ಮ ಬೆಂಗಳೂರು ಸೆಂಟ್ರಲ್ನಲ್ಲೂ ಮತ ಕಳ್ಳತನ ಆಗಿದ್ದನ್ನ ನೋಡಿದ್ದೇವೆ-ಸಚಿವ ಎಂ ಬಿ ಪಾಟೀಲ್



















