ನವದೆಹಲಿ: ಮತದಾನದ ಮಾದರಿ ಮತ್ತು ಸಮುದಾಯಗಳ ಓಲೈಕೆ ಬಗ್ಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ಮಹತ್ವದ ಹೇಳಿಕೆಯೊಂದನ್ನು ನೀಡಿದ್ದು, ಸರ್ಕಾರಿ ಯೋಜನೆಗಳು ಅಥವಾ ಆರ್ಥಿಕ ನೆರವು ಮತದಾನದ ನಿರ್ಧಾರವನ್ನು ಬದಲಿಸುವುದಿಲ್ಲ ಎಂದು ಪ್ರತಿಪಾದಿಸಿದ್ದಾರೆ.
ಖಾಸಗಿ ಸುದ್ದಿವಾಹಿನಿಯೊಂದರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, “ನಾನು 10 ಸಾವಿರ ರೂಪಾಯಿ ಅಲ್ಲ, 1 ಲಕ್ಷ ರೂಪಾಯಿ ಕೊಟ್ಟರೂ ಮುಸ್ಲಿಂ ಮತದಾರರು ನನ್ನನ್ನು ಆಯ್ಕೆ ಮಾಡುವುದಿಲ್ಲ,” ಎಂದು ನೇರವಾಗಿಯೇ ಹೇಳಿದ್ದಾರೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮಹಿಳೆಯರಿಗೆ ತಲಾ 10,000 ರೂ. ನೀಡುವ ‘ಮಹಿಳಾ ರೋಜ್ಗಾರ್ ಯೋಜನೆ’ಯ ಮಾದರಿಯಲ್ಲೇ, 2026ರ ಅಸ್ಸಾಂ ವಿಧಾನಸಭಾ ಚುನಾವಣೆಗೂ ಮುನ್ನ ಮತದಾರರನ್ನು ಸೆಳೆಯಲು ನಿಮ್ಮಲ್ಲೂ ಯಾವುದಾದರೂ ಯೋಜನೆ ಇದೆಯೇ ಎಂದು ಕೇಳಲಾದ ಪ್ರಶ್ನೆಗೆ ಶರ್ಮಾ ಈ ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ. ಜನರು ಕೇವಲ ಆರ್ಥಿಕ ಲಾಭಕ್ಕಾಗಿ ಮತ ಹಾಕುವುದಿಲ್ಲ, ಅವರು ಒಂದು ನಿರ್ದಿಷ್ಟ ಸಿದ್ಧಾಂತಕ್ಕೆ ಬದ್ಧರಾಗಿ ಮತ ಚಲಾಯಿಸುತ್ತಾರೆ ಎಂದು ಅವರು ವಿಶ್ಲೇಷಿಸಿದ್ದಾರೆ.
‘ಕಿಡ್ನಿ ಕೊಡಬಹುದು, ಆದರೆ ವೋಟ್ ಇಲ್ಲ’
ತಮ್ಮ ಮಾತನ್ನು ಸಮರ್ಥಿಸಿಕೊಳ್ಳಲು ಉದಾಹರಣೆಯೊಂದನ್ನು ನೀಡಿದ ಅವರು, ನಿರ್ದಿಷ್ಟವಾಗಿ ‘ಮಿಯಾ ಮುಸ್ಲಿಮರ’ (ಬಾಂಗ್ಲಾ ಮೂಲದ ವಲಸಿಗ ಮುಸ್ಲಿಮರು) ಬಗ್ಗೆ ಪ್ರಸ್ತಾಪಿಸಿದ್ದಾರೆ. “ಒಮ್ಮೆ ಮುಸ್ಲಿಂ ಸಮುದಾಯದ ಮತದಾರರೊಬ್ಬರು ನನ್ನ ಕೆಲಸವನ್ನು ಮೆಚ್ಚಿಕೊಂಡಿದ್ದರು ಮತ್ತು ಅಗತ್ಯವಿದ್ದರೆ ಕಿಡ್ನಿ ದಾನ ಮಾಡಲು ಸಿದ್ಧರಿದ್ದರು. ಆದರೆ ಅವರು ನನಗೆ ಎಂದಿಗೂ ಮತ ಹಾಕುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು,” ಎಂದು ಶರ್ಮಾ ಸ್ಮರಿಸಿದ್ದಾರೆ. ಯೋಜನೆಗಳನ್ನು ಜಾರಿಗೆ ತರುವುದು ಸರ್ಕಾರದ ಕರ್ತವ್ಯ, ಆದರೆ ಅದರಿಂದಲೇ ವೋಟು ಬರುತ್ತದೆ ಅಂದುಕೊಳ್ಳುವುದು ತಪ್ಪು ಲೆಕ್ಕಾಚಾರ ಎಂದಿದ್ದಾರೆ.
ಜನಸಂಖ್ಯಾ ಸ್ಫೋಟದ ಎಚ್ಚರಿಕೆ
ಇದೇ ವೇಳೆ ಅಸ್ಸಾಂನಲ್ಲಿ ಆಗುತ್ತಿರುವ ‘ಜನಸಂಖ್ಯಾ ಆಕ್ರಮಣ’ದ (Demographic invasion) ಬಗ್ಗೆಯೂ ಹಿಮಂತ ಬಿಸ್ವ ಶರ್ಮಾ ಕಳವಳ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಮುಸ್ಲಿಂ ಜನಸಂಖ್ಯೆ 2021ರಲ್ಲಿದ್ದ ಶೇ.38 ರಿಂದ 2027ರ ವೇಳೆಗೆ ಶೇ.40ಕ್ಕೆ ಏರಿಕೆಯಾಗಬಹುದು ಎಂದು ಅಂದಾಜಿಸಿದ್ದಾರೆ. ಒಂದು ವೇಳೆ ಈ ಪ್ರಮಾಣ ಶೇ.50ಕ್ಕೇರಿದರೆ, ಇತರೆ ಸಮುದಾಯಗಳು ಅಸ್ತಿತ್ವ ಕಳೆದುಕೊಳ್ಳುತ್ತವೆ ಮತ್ತು ಕೇವಲ ಆ ಒಂದು ಸಮುದಾಯ ಮಾತ್ರ ಉಳಿಯುತ್ತದೆ ಎಂದು ಎಚ್ಚರಿಸಿದ್ದಾರೆ. ಅಸ್ಸಾಂನ ಮೂಲ ನಿವಾಸಿಗಳು ದಶಕಗಳ ಅನಿಯಂತ್ರಿತ ವಲಸೆಯಿಂದ ಅಸ್ತಿತ್ವದ ಬಿಕ್ಕಟ್ಟು ಎದುರಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಇಷ್ಟೆಲ್ಲಾ ಹೇಳಿಕೆಗಳ ಹೊರತಾಗಿಯೂ, ರಾಜ್ಯದ ಮಿಯಾ ಮುಸ್ಲಿಮರು ಮತ್ತು ಮಹಿಳೆಯರೊಂದಿಗೆ ತಮಗೆ ವೈಯಕ್ತಿಕವಾಗಿ ಉತ್ತಮ ಬಾಂಧವ್ಯವಿದೆ. ಮುಸ್ಲಿಂ ಮತದಾರರು ಕಾಂಗ್ರೆಸ್ ಪರ ನಿಂತರೂ ತಮ್ಮ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ. ಆದರೆ, “ಯಾರು ಅಸ್ಸಾಮಿಗಳಲ್ಲವೋ ಮತ್ತು ಭಾರತೀಯರಲ್ಲವೋ ಅವರು ನನ್ನ ಜನರಲ್ಲ,” ಎಂದು ಖಡಕ್ ಆಗಿ ನುಡಿದಿದ್ದಾರೆ.
ಇದನ್ನೂ ಓದಿ: ಇಂಡಿಗೋ ವಿಮಾನ ರದ್ದು ಅವಾಂತರ : ನಾಲ್ವರು ಅಧಿಕಾರಿಗಳ ವಜಾ, ಸಿಇಒಗೆ ಡಿಜಿಸಿಎ ಬುಲಾವ್



















