ಬೆಂಗಳೂರು: ರಾಜ್ಯ ಸೇರಿದಂತೆ ಒಟ್ಟು 15 ರಾಜ್ಯಗಳಲ್ಲಿ ವಿವಿಧ ವಿಪತ್ತು ಪರಿಹಾರ ನಿಧಿಯನ್ನು ಕೇಂದ್ರ ಘೋಷಣೆ ಮಾಡಿದೆ.
ಒಟ್ಟು 1,115 ಕೋಟಿ ರೂ. ಹಣವನ್ನು ಮೋದಿ ಸರ್ಕಾರ ಬಿಡುಗಡೆ ಮಾಡಿದೆ. 1,000 ಕೋಟಿ ರೂ. ವಿವಿಧ ವಿಪತ್ತು ಪರಿಹಾರದ ಹಣವಾಗಿದ್ದರೆ, ಇನ್ನುಳಿದ ಹಣ ಸಾಮರ್ಥ್ಯ ವೃದ್ಧಿ ಯೋಜನೆಗೆ ನೀಡಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಬಿಜೆಪಿ ಅಧಿಕಾರದಲ್ಲಿದ್ದ ರಾಜ್ಯಗಳಿಗೆ ಹೆಚ್ಚಿನ ಅನುದಾನ ನೀಡಿದ್ದು, ವಿಪಕ್ಷಗಳಿಗೆ ಕಡಿಮೆ ಅನುದಾನ ನೀಡಿದೆ. ಹೀಗಾಗಿ ಕರ್ನಾಟಕಕ್ಕೆ ಕೇವಲ 72 ಕೋಟಿ ರೂ. ನೀಡಲಾಗಿದೆ.
ಎನ್ಡಿಎ ಸರ್ಕಾರವಿರುವ ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶಕ್ಕೆ ತಲಾ 139 ಕೋಟಿ ರೂ. ಹಾಗೂ ಮಹಾರಾಷ್ಟ್ರಕ್ಕೆ ಬರೋಬ್ಬರಿ 100 ಕೋಟಿ ರೂ. ನೀಡಲಾಗಿದೆ. ವಿರೋಧ ಪಕ್ಷಗಳು ಇರುವ ಕರ್ನಾಟಕ ಮತ್ತು ಕೇರಳಕ್ಕೆ ತಲಾ 72 ಕೋಟಿ ರೂ. ನೀಡಿದ್ದರೆ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳಕ್ಕೆ ತಲಾ 50 ಕೋಟಿ ರೂ. ಹಂಚಿಕೆ ಮಾಡಲಾಗಿದೆ.
ಎಂಟು ಈಶಾನ್ಯ ರಾಜ್ಯಗಳಾದ ಅಸ್ಸಾಂ, ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ ಮತ್ತು ತ್ರಿಪುರಕ್ಕೆ 378 ಕೋಟಿ ರೂ. ಪರಿಹಾರ ಬಿಡುಗಡೆ ಮಾಡಲಾಗಿದೆ.