ಬೆಂಗಳೂರು : ಕಾಂತಾರ ಚಾಪ್ಟರ್-1 ಚಿತ್ರದ ದೈವಪಾತ್ರದ ಬಗ್ಗೆ ಅವಹೇಳನಕಾರಿ ಹೇಳಿಕೆ ಆರೋಪ ಸಂಬಂಧ ಬಾಲಿವುಡ್ ನಟ ರಣವೀರ್ ಸಿಂಗ್ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ಆದೇಶ ನೀಡಿದೆ.
ತಮ್ಮ ವಿರುದ್ಧದ ಖಾಸಗಿ ದೂರು ಮತ್ತು ಎಫ್ಐಆರ್ ರದ್ದು ಕೋರಿ ರಣವೀರ್ ಸಿಂಗ್ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಸೂಚನೆ ನೀಡಿದೆ. ಅಲ್ಲದೆ, ಅರ್ಜಿದಾರರು ತಮ್ಮ ಹೇಳಿಕೆ ಸಂಬಂಧ ಕ್ಷಮಾಪಣೆ ಮಾಡಿದ್ದಾರೆ, ಅವರ ವಿರುದ್ಧ ಬಲವಂತದ ಕ್ರಮ ಕೈಗೊಳ್ಳಬಾರದು. ಇದೇ ವೇಳೆ ಅರ್ಜಿದಾರರು ತನಿಖೆಗೆ ಸಹಕಾರ ನೀಡಬೇಕು ಎಂದು ಸೂಚನೆ ನೀಡಿದ ನ್ಯಾಯಪೀಠ, ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ವಿಚಾರಣೆಯನ್ನು ಮಾ.2ರ ಸಂಜೆ 4 ಗಂಟೆಗೆ ಮುಂದೂಡಿದೆ.
ಇದಕ್ಕೂ ಮುನ್ನ ನಡೆದ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ನಟ ರಿಶಬ್ ಶೆಟ್ಟಿ ನಟನೆಯನ್ನು ರಣವೀರ್ ಸಿಂಗ್ ಹೊಗಳಿದ್ದಾರೆ. ಸಂವೇದನಾಶೀಲವಲ್ಲದ ಹೇಳಿಕೆ ಬಳಸಿರುವುದನ್ನು ತಿಳಿದು ಕ್ಷಮೆ ಕೇಳಿದ್ದಾರೆ ಎಂದು ತಿಳಿಸಿದರು.
ಇದಕ್ಕೆ ಪೀಠ, ರಿಶಬ್ ಶೆಟ್ಟಿ ದೇಹದಲ್ಲಿ ದೈವ ಪ್ರವೇಶಿಸುವ ಪಾತ್ರ ಮಾಡಿದ್ದಾರೆ. ನೀವೂ ಸೂಪರ್ ಸ್ಟಾರ್ ಆಗಿದ್ದೀರಾ ಜವಾಬ್ದಾರಿಯಿಂದಿರಬೇಕು. ಯಾರೇ ಆಗಿರಲಿ ನಿಮಗೆ ತಿಳಿಯದ ದೈವದ ಬಗ್ಗೆ ಸಡಿಲವಾಗಿ ನೋಡಬಾರದು. ಯಾರ ಧಾರ್ಮಿಕ ಭಾವನೆಗೂ ಧಕ್ಕೆ ತರುವ ಹಕ್ಕು ನಿಮಗೆ ಇಲ್ಲ ಎಂದು ತಿಳಿಸಿತು. ಇದಕ್ಕೆ ವಕೀಲರು, ರಣವೀರ್ ಸಿಂಗ್ ಈ ಭಾಗದವರಲ್ಲ, ಅವರಿಗೆ ಇಲ್ಲಿನ ಸಂವೇದನೆಯ ಅರಿವಿಲ್ಲ. ಹೀಗಾಗಿ ದುರುದ್ದೇಶದಿಂದ ಈ ಹೇಳಿಕೆ ನೀಡಿದ್ದಾರೆಂದು ಭಾವಿಸಬಾರದು ಎಂದು ತಿಳಿಸಿದರು.
ದೂರುದಾರರ ಪರ ವಕೀಲರು, ಘಟನೆ ನಡೆದ ಸಂದರ್ಭದಲ್ಲಿ ರಿಶಬ್ ಶೆಟ್ಟಿ ಬೇಡ ಎಂದು ಹೇಳಿದರೂ ರಣವೀರ್ ಸಿಂಗ್ ಮಾತು ಮುಂದುವರಿಸಿದ್ದರು. ಅವರ ಪತ್ನಿ ದೀಪಿಕಾ ಪಡುಕೋಣೆ ಕರ್ನಾಟಕದವರು, ಅವರಿಗೆ ಇಲ್ಲಿನ ಆಚರಣೆ ಬಗ್ಗೆ ಅರಿವಿದೆ ಎಂದು ತಿಳಿಸಿದರು. ವಾದ ಆಲಿಸಿದ ಪೀಠ, ವಿಚಾರಣೆಯನ್ನು ಮುಂದೂಡಿತು.
ಇದನ್ನೂ ಓದಿ : ಮೆಕ್ಸಿಕೋ ಡ್ರಗ್ ದೊರೆ ಎಲ್.ಮೆಂಚೊ ಅಂತ್ಯ ಕಾಣಲು ನೆರವಾಗಿದ್ದು ಆತನ ಪ್ರಿಯತಮೆ!



















