ಕೊಪ್ಪಳ: ಸಿಎಂ ಕಾನ್ವೆಗೆ ಎದುರಾಗಿ ಕಾರು ಚಲಾಯಿಸಿ ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಶಾಸಕ ಜನಾರ್ದನ ರೆಡ್ಡಿ(Janardhan Reddy) ಅವರಿಗೆ ಸೇರಿದ್ದ ರೇಂಜ್ ರೋವರ್ ಕಾರನ್ನು ಗಂಗಾವತಿ ಸಂಚಾರಿ ಠಾಣೆ ಪೊಲೀಸರು ಸೀಜ್ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಕಾರು ಜಪ್ತಿ ಮಾಡಿದ ಪೊಲೀಸರು ಗಂಗಾವತಿಗೆ ತಂದಿದ್ದಾರೆ. ರೆಡ್ಡಿ ಅವರ ಕಾರು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ಬೆಂಗಾವಲು ವಾಹನಕ್ಕೆ ಎದುರಾಗಿ ಹೋಗಿತ್ತು. ಹೀಗಾಗಿ ಕರ್ತವ್ಯದಲ್ಲಿದ್ದ ಪೊಲೀಸರು ಚಾಲಕನ ವಿರುದ್ಧ ದೂರು ದಾಖಲಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಜನಾರ್ದನ ರೆಡ್ಡಿ, ‘ರಾಜಕೀಯವಾಗಿ ಸಿದ್ದರಾಮಯ್ಯ ಏನೇ ಇದ್ದರೂ, ತೊಂದರೆ ಕೊಟ್ಟರೂ, ಸಿದ್ದರಾಮಯ್ಯ ಅಲ್ಲದೇ ಹೋದರೂ ನಾನು ಸಿಎಂ ಸ್ಥಾನಕ್ಕೆ ಗೌರವ ನೀಡುತ್ತೇನೆ. ಅಂದು ಗಂಗಾವತಿಗೆ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಹೋಗಿದ್ದೆ. ಬಳ್ಳಾರಿಯಲ್ಲಿ ಮನೆಯಲ್ಲಿ ಹೋಮ ನಡೆಯುತ್ತಿತ್ತು. ಪೂರ್ಣಾಹುತಿಗೆ ಬರಬೇಕು ಎಂದು ಹೇಳಿದ್ದರು. ಹೀಗಾಗಿ ಮನೆಗೆ ಹೊರಟಿದ್ದೆ. ಕಾರಿನಲ್ಲಿ ಸಿಸಿ ಕ್ಯಾಮೆರಾ ಇದೆ, ದೃಶ್ಯಾವಳಿ ಕೊಡುತ್ತೇನೆ. ಅರ್ಧ ಗಂಟೆ ಕಾಲ ಕಾದರೂ ಕಾನ್ವೇ ಬರಲಿಲ್ಲ. ನಾನು ಪೊಲೀಸರಿಗೆ ಹೇಳಿ ಹೋಗಬಹುದಿತ್ತು. ನನ್ನ ಮುಂದಿನ ವಾಹನ ಬಿಟ್ಟರೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಡಿವೈಡರ್ ಮೇಲೆ ಹೋದೆ ಎಂದಿದ್ದಾರೆ.
ಇದು ಮದ ಎನ್ನುವುದು ಶಿವರಾಜ್ ತಂಗಡಗಿಗೆ ಬಹಳಷ್ಟು ಹೆಚ್ಚಿದೆ. ಮುಂದಿನ ದಿನಗಳಲ್ಲಿ ಜನ ಅವರಿಗೆ ಬುದ್ದಿ ಕಲಿಸುತ್ತಾರೆ. ಮುಂದೆ ಅವರಿಗೆ ಡೆಪಾಸಿಟ್ ಕೂಡ ಸಿಗಲ್ಲ. ನಾನು ಡಿವೈಡರ್ ಮೂಲಕ ಹೋಗಿದ್ದೆ. ಆದರೆ, ಡ್ರೈವರ್ ಮೇಲೆ ಎಫ್ ಐಆರ್ ಆಗಿದೆ. ನಾನು ಕಾನೂನಿನ ಮೂಲಕ ಕೇಸ್ ಎದುರಿಸಲಿದ್ದೇನೆ ಎಂದಿದ್ದಾರೆ.