ಬೆಂಗಳೂರು: ರಾಜ್ಯ ಆಡಳಿತಕ್ಕೆ ಸಾಕಷ್ಟು ಸುಧಾರಣೆ ತರುವ ಹಿನ್ನೆಲೆಯಲ್ಲಿ 23 ಇಲಾಖೆಗಳಲ್ಲಿ 15 ಸಾವಿರ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಬೇಕೆಂದು ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಅಧ್ಯಕ್ಷತೆಯ ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2 ತನ್ನ ಎಂಟನೇ ವರದಿಯಲ್ಲಿ ಶಿಫಾರಸು ಮಾಡಿದೆ.
ಸಿದ್ದರಾಮಯ್ಯ ಅವರನ್ನು ಗುರುವಾರ ಭೇಟಿಯಾದ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ, 189 ಶಿಫಾರಸು ಒಳಗೊಂಡ ವರದಿ ಸಲ್ಲಿಸಿದರು. ಠಾಣೆಯ ಗಡಿಗಳ ಗುರುತು, ಬಿಪಿಎಲ್ ಕಾರ್ಡ್ ರದ್ದತಿಗೂ ಮೊದಲು ಮೇಲ್ಮನವಿಗೆ ಅವಕಾಶ ಕಲ್ಪಿಸುವುದು, ದೇವಾಲಯ ಕಾರ್ಯಪಡೆ ಸ್ಥಾಪನೆ ಸೇರಿದಂತೆ 189 ಹೊಸ ಶಿಫಾರಸುಗಳನ್ನು ಆಯೋಗ ವರದಿಯಲ್ಲಿ ಹೇಳಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಆರ್.ವಿ. ದೇಶಪಾಂಡೆ, ”ಆಯೋಗವು 23 ಇಲಾಖೆಗಳ ಕಾರ್ಯವೈಖರಿ ಗಮನಿಸಿದೆ. 23 ಇಲಾಖೆಗಳಲ್ಲಿ ಮಂಜೂರಾದ ಒಟ್ಟು 21,442 ಹುದ್ದೆಗಳ ಪೈಕಿ 15,000 ಹುದ್ದೆ ಖಾಲಿ ಇರುವುದನ್ನು ಗುರುತಿಸಲಾಗಿದೆ ಎಂದಿದ್ದಾರೆ.