ಬೆಂಗಳೂರು: ಡಬ್ಲ್ಯುಪಿಎಲ್ನಲ್ಲಿ ಬೆಂಗಳೂರಿನಲ್ಲಿ ಆಡಿರುವ 4 ಪಂದ್ಯಗಳಲ್ಲಿ ಹೀನಾಯ ಸೋಲು ಕಂಡ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCBW) ನಾಯಕಿ ಸ್ಮೃತಿ ಮಂಧಾನ (Smriti Mandhana) ಆರ್ಸಿಬಿ ಅಭಿಮಾನಿಗಳಲ್ಲಿ ಕ್ಷೆಮೆ ಕೋರಿದ್ದಾರೆ.
ಶನಿವಾರ ನಡೆದ ನಿರ್ಣಾಯಕ ಮುಖಾಮುಖಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 9 ವಿಕೆಟ್ಗಳಿಂದ ಸೋತ ಕಾರಣ ತಂಡದ ನಾಕೌಟ್ ಹಾದಿ ಕಷ್ಟವಾಗಿದೆ. ಉಳಿದಿರುವ ಎರಡು ಪಂದ್ಯಗಳಲ್ಲಿ ದೊಡ್ಡ ಅಂತರದಿಂದ ಗೆದ್ದರೆ ಮಾತ್ರ ಅವಕಾಶಗಳಿರುತ್ತವೆ. ಎಲ್ಲದಕ್ಕಿಂತಲೂ ಹೆಚ್ಚಾಗಿ ಕಟ್ಟರ್ ಆರ್ಸಿಬಿ ಅಭಿಮಾನಿಗಳಿಗೆ ಬೇಸರ ಉಂಟಾಗಿದೆ.
“ನಾನು ಕ್ಷಮಿಸಿ ಎಂದು ಅಭಿಮಾನಿಗಳಿಗೆ ಕೇಳುತ್ತೇನೆ. ಬೆಂಗಳೂರಿನಲ್ಲಿ ನಿಮಗಾಗಿ ಒಂದೇ ಒಂದು ಪಂದ್ಯವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ದೊಡ್ಡ ಸಂಖ್ಯೆಯಲ್ಲಿ ಬಂದು ನೀವು ನಮ್ಮನ್ನು ಬೆಂಬಲಿಸಿದ್ದೀರಿ. ಆದರೆ ಕ್ರಿಕೆಟ್ನಲ್ಲಿ ಸೋಲಾಗಿದೆ. ನಾವು ಫಲಿತಾಂಶ ಬದಿಗಿಡಬೇಕು. ನಾವು ಅದನ್ನು ಮರೆತುಬಿಡಬೇಕು ಮತ್ತು ಮುಂದೆ ಸಾಗಬೇಕು. ಸೋತರೂ ಕೂಡ ನಿಮ್ಮ ಬೆಂಬಲ ಮಾತ್ರ ಎಂದೆಂದಿಗೂ ಹೀಗೆ ಇರುತ್ತದೆ ಎಂದು ನನಗೆ ತಿಳಿದಿದೆ. ಅದಕ್ಕಾಗಿಯೇ ನೀವು ವಿಶ್ವದ ಅತ್ಯುತ್ತಮ ಅಭಿಮಾನಿಗಳು. ಖಚಿತವಾಗಿ ಎಲ್ಲ ತಪ್ಪುಗಳನ್ನು ತಿದ್ದಿಕೊಂಡು ಮತ್ತೆ ಗೆಲುವಿನ ಹಳಿಗೆ ಮರಳುತ್ತೇವೆ” ಎಂದು ಮಂಧಾನ ಹೇಳಿದರು.
ಶನಿವಾರ ನಡೆದಿದ್ದ ಬೆಂಗಳೂರು ಚರಣದ ಅಂತಿಮ ಪಂದ್ಯದಲ್ಲಿ ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡೂ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನ ತೋರಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆರ್ಸಿಬಿಯನ್ನು 9 ವಿಕೆಟ್ಗಳಿಂದ ಮಗುಚಿ ಹಾಕಿತು. ಜತೆಗೆ ಮೊದಲ ಸುತ್ತಿನ ಸೋಲಿಗೆ ಸೇಡು ತೀರಿಸಿಕೊಂಡಿತು.
ಮೊದಲು ಬ್ಯಾಟಿಂಗ್ ನಡೆಸಿದ ಆರ್ಸಿಬಿ ಶಿಖಾ ಪಾಂಡೆ ಬೌಲಿಂಗ್ ದಾಳಿಗೆ ತತ್ತರಿಸಿ 5 ವಿಕೆಟ್ಗೆ 147 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಡೆಲ್ಲಿ ಶಫಾಲಿ ವರ್ಮಾ (80) ಹಾಗೂ ಜೆಸ್ ಜೊನಾಸೆನ್ (61) ಸ್ಪೋಟಕ ಬ್ಯಾಟಿಂಗ್ ನೆರವಿನಿಂದ 15.3 ಓವರ್ಗಳಲ್ಲಿ ಕೇವಲ ಒಂದು ವಿಕೆಟ್ಗೆ 151 ರನ್ ಬಾರಿಸಿ ಗೆಲುವು ಸಾಧಿಸಿತು.