ನವದೆಹಲಿ, ಜೂನ್ 7, 2025: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ಪ್ರಶಸ್ತಿ ಗೆಲುವಿನ ಸಂಭ್ರಮಾಚರಣೆಯ ವೇಳೆ ನಡೆದ ಕಾಲ್ತುಳಿತ ದುರಂತಕ್ಕೆ 11 ಮಂದಿ ಸಾವನ್ನಪ್ಪಿ, 47 ಮಂದಿ ಗಾಯಗೊಂಡಿರುವ ಬಗ್ಗೆ 1983ರ ವಿಶ್ವಕಪ್ ವಿಜೇತ ಭಾರತ ತಂಡದ ನಾಯಕ ಕಪಿಲ್ ದೇವ್ ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಒಂದು ತಂಡದ ಸಂಭ್ರಮಾಚರಣೆಗಿಂತ ಜನರ ಜೀವಗಳು ಹೆಚ್ಚು ಮುಖ್ಯ ಎಂದು ಅವರು ಒತ್ತಿ ಹೇಳಿದ್ದಾರೆ.
ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಕಪಿಲ್ ದೇವ್, “ಈ ದುರ್ಘಟನೆ ಬಗ್ಗೆ ನನಗೆ ತುಂಬಾ ಬೇಸರವಾಗಿದೆ. ಈ ವಿಷಯದ ಬಗ್ಗೆ ನಾವು ಒಬ್ಬರಿಗೊಬ್ಬರು ಕಲಿಯಬೇಕಾಗಿದೆ. ಮುಂದಿನ ಸಲ ಈ ರೀತಿ ಸಂಭ್ರಮಾಚರಣೆಯಲ್ಲಿ ತೊಡಗುವಾಗ ತುಂಬಾ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಜನರು ತಪ್ಪುಗಳನ್ನು ಮಾಡುವುದು ಸಹಜ,” ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಈ ದುರ್ಘಟನೆಯಿಂದ ತಂಡಗಳು ಹಾಗೂ ಆಯೋಜಕರು ಎಚ್ಚೆತ್ತುಕೊಳ್ಳಬೇಕು ಹಾಗೂ ಭವಿಷ್ಯದಲ್ಲಿ ದೊಡ್ಡ ಸಂಭ್ರಮಾಚರಣೆಗಳನ್ನು ಮಾಡುವುದನ್ನು ತಪ್ಪಿಸಬೇಕು ಎಂದು ಕಪಿಲ್ ದೇವ್ ಆಗ್ರಹಿಸಿದ್ದಾರೆ. “ನೀವು ಆನಂದಿಸುತ್ತಿರುವಾಗ ಮತ್ತು ನೀವು ಜೀವಗಳನ್ನು ಕಳೆದುಕೊಳ್ಳುವಷ್ಟು ದೊಡ್ಡ ತಪ್ಪು ಮಾಡಬಾರದು. ಭವಿಷ್ಯದಲ್ಲಿ, ಯಾವುದೇ ತಂಡ ಗೆದ್ದರೆ, ಅದನ್ನು ಶಾಂತವಾಗಿಡಿ. ಆಚರಣೆಗಿಂತ ಜೀವಗಳು ಮುಖ್ಯ. ಅದನ್ನು ಹಾಗೆಯೇ ಇಡೋಣ,” ಎಂದು ಮಾಜಿ ಆಲ್ರೌಂಡರ್ ಸ್ಪಷ್ಟಪಡಿಸಿದ್ದಾರೆ.
ಜೂನ್ 4 ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ಸಿಬಿ ತಂಡದ ಚೊಚ್ಚಲ ಐಪಿಎಲ್ ಕಪ್ ಗೆಲುವಿನ ಸಂಭ್ರಮಾಚರಣೆಯನ್ನು ಆಯೋಜಿಸಲಾಗಿತ್ತು. ಆರ್ಸಿಬಿ ತಂಡದ ಮೊದಲ ಕಪ್ ಆಗಿದ್ದರಿಂದ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉತ್ಸುಕರಾಗಿದ್ದರು. ಕ್ರೀಡಾಂಗಣದ ಸಾಮರ್ಥ್ಯ ಸುಮಾರು 30 ಸಾವಿರ ಇದ್ದರೂ, ಎರಡು ಲಕ್ಷಕ್ಕೂ ಅಧಿಕ ಅಭಿಮಾನಿಗಳು ಸ್ಟೇಡಿಯಂಗೆ ಬಂದಿದ್ದರು. ಈ ಹಿನ್ನೆಲೆಯಲ್ಲಿ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿತ್ತು.
ಘಟನೆಯಲ್ಲಿ ರಾಜ್ಯದ ವಿವಿಧ ಭಾಗದ 11 ಮಂದಿ ಸಾವನ್ನಪ್ಪಿದ್ದು, 47 ಮಂದಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆಯ ನಂತರ, ಬಿಜೆಪಿ ಸೇರಿದಂತೆ ವಿರೋಧ ಪಕ್ಷಗಳು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರ ವಿರುದ್ಧ ದೂರು ದಾಖಲಿಸಿವೆ.