ಬೆಂಗಳೂರು: 18 ವರ್ಷಗಳ ನಂತರ ಆರ್ ಸಿಬಿ ಐಪಿಎಲ್ ಕಪ್ ಗೆದ್ದಿದೆ. ಆದರೆ, ಈ ಸಂಭ್ರಮಾಚರಣೆಯಲ್ಲಿ ಸೂತಕ ಆವರಿಸಿದ್ದು, ಕಾಲ್ತುಳಿತ ಉಂಟಾಗಿ 11 ಜನ ಸಾವನ್ನಪ್ಪಿದ್ದಾರೆ.
ಕಾಲ್ತುಳಿತದಲ್ಲಿ (Chinnaswamy Stampede) ಉಂಟಾದ ಅಭಿಮಾನಿಗಳ ಸಾವು-ನೋವಿಗೆ ಆರ್ಸಿಬಿ ಫ್ರಾಂಚೈಸಿ ಹಾಗೂ ಪೊಲೀಸ್ ಇಲಾಖೆಯ ವೈಫಲ್ಯವೇ ಕಾರಣ ಎನ್ನುವುದು ಸಾರ್ವಜನಿಕರ ಆಕ್ರೋಶವಾಗಿದೆ.
ಆರ್ ಸಿಬಿ ಫ್ರಾಂಚೈಸಿ ವಿಧಾನಸೌಧದಿಂದ ಚಿನ್ನಸ್ವಾಮಿ ಸ್ಟೇಡಿಯಂ ವರೆಗೆ ವಿಕ್ಟರಿ ಪೆರೇಡ್ ನಡೆಸುವುದಾಗಿ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿತ್ತು. ಘೋಷಣೆಗೂ ಮುನ್ನ ಯಾವುದೇ ಪೊಲೀಸ್ (Bengaluru Police Department) ಅನುಮತಿ ಪಡೆದಿರಲಿಲ್ಲ. ಪೊಲೀಸರು ಸಹ ಈ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಈ ವೇಳೆ ಸಿಎಂ ಭಾಗವಹಿಸುತ್ತಿರುವುದರಿಂದ ಸ್ಟೇಡಿಯಂಗಿಂತ ವಿಧಾನಸೌಧ ಕಾರ್ಯಕ್ರಮಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗಿತ್ತು.
ಅಲ್ಲಿ ಅತಿಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಪೊಲೀಸರು ಮಧ್ಯಾಹ್ನ 2 ಗಂಟೆ ವೇಳೆಗೆ ಟಿಕೆಟ್, ಪಾಸ್ ಇದ್ದವರಿಗೆ ಮಾತ್ರ ಅವಕಾಶ ಎಂದು ಹೇಳಿದ್ದರು. ಆದರೆ, ಟಿಕೆಟ್ ಎಲ್ಲಿ ಸಿಗುತ್ತದೆ ಎಂಬುವುದೇ ಅಭಿಮಾನಿಗಳಿಗೆ ತಿಳಿದಿರಲಿಲ್ಲ. ಪೊಲೀಸರು ಹಾಗೂ ಫ್ರಾಂಚೈಸಿ ಕೂಡ ಹೇಳಿರಲಿಲ್ಲ. ನಂತರ ಮಧ್ಯಾಹ್ನ 3.30ರ ವೇಳೆಗೆ ಫ್ರೀ ಪಾಸ್ ಸಿಗುತ್ತದೆ ಎಂದು ಫ್ರಾಂಚೈಸಿ ಹೇಳಿತು. ಹೀಗಾಗಿ ಲಕ್ಷಾಂತರ ಜನರು ಕ್ರೀಡಾಂಗಣಕ್ಕೆ ಆಗಮಿಸಿದ್ದರು.
ಗೃಹ ಸಚಿವ ಪರಮೇಶ್ವರ್, ವಿಕ್ಟರಿ ಪೆರೇಡ್ ಇಲ್ಲ, ವಿಧಾನಸೌಧಕ್ಕೆ ಎಂಟ್ರಿ ಇಲ್ಲ, ಸ್ಟೇಡಿಯಂಗೆ ಹೋಗಿ ಎಂದರು. ಹೀಗಾಗಿ ಜನ ನುಗ್ಗಲು ಯತ್ನಿಸಿದರು. ದುರಂತ ಸಂಭವಿಸಿದ್ದು, 11 ಜನ ಅಮಾಯಕರು ಸಾವನ್ನಪ್ಪುವಂತಾಯಿತು. ಹಲವರು ಗಂಭೀರವಾಗಿದ್ದಾರೆ. ಸಾವು- ನೋವಿನ ಮಧ್ಯೆ ಹೋರಾಟ ಮಾಡುತ್ತಿದ್ದಾರೆ. ಕುಟುಂಬಸ್ಥರು ಕಣ್ಣೀರು ಸುರಿಸುವಂತಾಗಿದೆ.