ಬೆಂಗಳೂರು: ಉಚಿತ ಪಡಿತರ, ಆಯುಷ್ಮಾನ್ ಭಾರತ್ ಸೇರಿ ಸರ್ಕಾರದ ಹಲವು ಯೋಜನೆಗಳನ್ನು ಪಡೆಯಲು ರೇಷನ್ ಕಾರ್ಡ್ ಪ್ರಮುಖವಾಗಿದೆ. ಈ ರೇಷನ್ ಕಾರ್ಡ್ ನಲ್ಲಿ ಹೆಸರು ತಿದ್ದುಪಡಿ, ವಿಳಾಸ ಬದಲಾವಣೆ ಸೇರಿ ಯಾವುದೇ ತಿದ್ದುಪಡಿ ಮಾಡಿಕೊಳ್ಳಲು ರಾಜ್ಯ ಸರ್ಕಾರವು ಮಾರ್ಚ್ 31ರ ಗಡುವು ನೀಡಿದೆ. ಹಾಗಾಗಿ, ಅಗತ್ಯ ತಿದ್ದುಪಡಿ ಮಾಡಲು ಬಯಸುವವರು ಮಾರ್ಚ್ 31ರೊಳಗೆ ಮಾಡಿ ಮುಗಿಸಬೇಕಿದೆ. ಹೇಗೆ ಮಾಡಬೇಕು? ಯಾವ ದಾಖಲೆ ಬೇಕು ಎಂಬುದರ ಮಾಹಿತಿ ಇಲ್ಲಿದೆ.
ಯಾವೆಲ್ಲ ತಿದ್ದುಪಡಿ ಸಾಧ್ಯ?
- ಹೊಸ ಹೆಸರು ಸೇರ್ಪಡೆ: ಹೊಸದಾಗಿ ಹುಟ್ಟಿದ ಮಗು ಅಥವಾ ಮದುವೆಯಾಗಿ ಬಂದ ಸೊಸೆಯ ಹೆಸರನ್ನು ಸೇರಿಸಬಹುದು.
- ಹೆಸರು ತೆಗೆಯುವುದು: ಮರಣ ಹೊಂದಿದವರ ಅಥವಾ ಮದುವೆಯಾಗಿ ಬೇರೆಡೆಗೆ ಹೋದವರ ಹೆಸರನ್ನು ಪಟ್ಟಿಯಿಂದ ಕೈಬಿಡಬಹುದು.
- ವಿಳಾಸ/ಮೊಬೈಲ್ ಸಂಖ್ಯೆ ಬದಲಾವಣೆ: ಮನೆ ಶಿಫ್ಟ್ ಆಗಿದ್ದರೆ ವಿಳಾಸವನ್ನು ಹಾಗೂ ಹೊಸ ಮೊಬೈಲ್ ಸಂಖ್ಯೆಯನ್ನು ಅಪ್ಡೇಟ್ ಮಾಡಬಹುದು.
- ಹೆಸರಿನ ತಿದ್ದುಪಡಿ: ಆಧಾರ್ ಕಾರ್ಡ್ನಲ್ಲಿರುವಂತೆ ಹೆಸರಿನ ಸ್ಪೆಲ್ಲಿಂಗ್ (Spelling) ತಪ್ಪುಗಳನ್ನು ಸರಿಪಡಿಸಬಹುದು.
- ನ್ಯಾಯಬೆಲೆ ಅಂಗಡಿ ಬದಲಾವಣೆ: ನಿಮ್ಮ ಮನೆಗೆ ಹತ್ತಿರವಿರುವ ರೇಷನ್ ಅಂಗಡಿಯನ್ನು ಬದಲಾಯಿಸಿಕೊಳ್ಳಬಹುದು.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು
ಈಗಿರುವ ಪಡಿತರ ಚೀಟಿಯ ಪ್ರತಿ.
ಆಧಾರ್ ಕಾರ್ಡ್: ಕುಟುಂಬದ ಎಲ್ಲ ಸದಸ್ಯರ (ಹೊಸದಾಗಿ ಸೇರಿಸುವವರೂ ಸೇರಿ) ಆಧಾರ್ ಕಾರ್ಡ್ ಕಡ್ಡಾಯ.
ಜನನ/ಮರಣ ಪ್ರಮಾಣಪತ್ರ: 6 ವರ್ಷದೊಳಗಿನ ಮಕ್ಕಳ ಹೆಸರು ಸೇರಿಸಲು ಜನನ ಪ್ರಮಾಣಪತ್ರ, ಹಾಗೂ ಮೃತರ ಹೆಸರು ತೆಗೆಯಲು ಮರಣ ಪ್ರಮಾಣಪತ್ರ.
ಜಾತಿ ಮತ್ತು ಆದಾಯ ಪ್ರಮಾಣಪತ್ರ: ಹೊಸದಾಗಿ ಬಿಪಿಎಲ್ (BPL) ಕಾರ್ಡ್ಗೆ ಹೆಸರು ಸೇರಿಸುವವರಿಗೆ ಇದು ಅಗತ್ಯವಿರುತ್ತದೆ.
ಮೊಬೈಲ್ ಸಂಖ್ಯೆ: ಆಧಾರ್ಗೆ ಲಿಂಕ್ ಆಗಿರುವ ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ.
ಅರ್ಜಿ ಸಲ್ಲಿಕೆ ಅಥವಾ ತಿದ್ದುಪಡಿ ಹೇಗೆ?
- ಮೊದಲಿಗೆ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕೃತ ವೆಬ್ಸೈಟ್ https://ahara.kar.nic.in ಗೆ ಭೇಟಿ ನೀಡಬೇಕು.
- ಇ-ಸೇವೆಗಳು ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು.
- “ತಿದ್ದುಪಡಿ ಅಥವಾ ಹೊಸ ಸದಸ್ಯರ ಸೇರ್ಪಡೆಗೆ ಸಂಬಂಧಿಸಿದ ಆಪ್ಶನ್ ಮೇಲೆ ಕ್ಲಿಕ್ ಮಾಡಬೇಕು.
- ಅರ್ಜಿ ನಮೂನೆಯಲ್ಲಿ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಬೇಕು.
- ಆಧಾರ್ ಕಾರ್ಡ್, ಜನನ ಪ್ರಮಾಣಪತ್ರ, ಮದುವೆ ಪ್ರಮಾಣಪತ್ರ ಸೇರಿ ಅಗತ್ಯ ದಾಖಲೆಗಳನ್ನು ಅಪ್ ಲೋಡ್ ಮಾಡಬೇಕು.
- ಅರ್ಜಿ ಸಲ್ಲಿಕೆಯ ನಂತರ, ನೀವು ಒಂದು ನೋಂದಣಿ ಸಂಖ್ಯೆಯನ್ನು ಪಡೆಯುತ್ತೀರಿ. ಇದರ ಮೂಲಕ ನಿಮ್ಮ ಅಪ್ಲಿಕೇಶನ್ ಸ್ಥಿತಿಯನ್ನು ಟ್ರ್ಯಾಕ್ ಮಾಡಬಹುದು.
ಇದನ್ನೂ ಓದಿ : ತಿಂಗಳಿಗೆ ಕೇವಲ 1 ಸಾವಿರ ರೂಪಾಯಿ ಉಳಿಸಿದರೆ ಸಾಕು, ನಿಮ್ಮ ಮಗಳ ಭವಿಷ್ಯ ಸುಭದ್ರ



















