ರಣಥಂಭೋರ್ ರಾಣಿ ಎರೋಹೆಡ್ ಇನ್ನಿಲ್ಲ: ಮಗಳ ಅಗಲಿಕೆಯೇ ಸಾವಿಗೆ ಕಾರಣವಾಯಿತೇ?
ಜೈಪುರ: ರಾಜಸ್ಥಾನದ ರಣಥಂಭೋರ್ ರಾಷ್ಟ್ರೀಯ ಉದ್ಯಾನವನದಲ್ಲಿ ಭಾರೀ ಜನಪ್ರಿಯವಾಗಿದ್ದ ಹೆಣ್ಣು ಹುಲಿ ಎರೋಹೆಡ್ (ಟಿ-84) ಗುರುವಾರ ಮೃತಪಟ್ಟಿದೆ. ಅದಕ್ಕಿಂತಲೂ ಮುಖ್ಯವಾಗಿ ಎರೋಹೆಡ್ ಪುತ್ರಿಯಾದ ಕಾಂಕತಿ (ಆರ್ಬಿಟಿ-2507)ಯನ್ನು ಮುಕುಂದ್ರ ಹಿಲ್ಸ್ನ ಹುಲಿ ರಕ್ಷಿತಾರಣ್ಯಕ್ಕೆ ಸ್ಥಳಾಂತರ ಮಾಡಿದ ಕೆಲವೇ ಗಂಟೆಗಳಲ್ಲಿ, ಮಗಳ ಅಗಲಿಕೆ ತಾಳಲಾರದೇ ತಾಯಿ ಪ್ರಾಣ ಕಳೆದುಕೊಂಡಿದ್ದಾಳೆ ಎಂದೂ ವಿಶ್ಲೇಷಿಸಲಾಗುತ್ತಿದೆ. ಎರೋಹೆಡ್ನ ಸಾವು ವನ್ಯಜೀವಿ ಪ್ರೇಮಿಗಳಿಗೆ ಆಘಾತವನ್ನುಂಟು ಮಾಡಿದೆ.
ಎರೋಹೆಡ್ ರಣಥಂಭೋರ್ನ ದಂತಕತೆ ಮಚ್ಲಿ ಎಂಬ ಹುಲಿಯ ಮೊಮ್ಮಗಳು ಮತ್ತು ಕೃಷ್ಣ (ಟಿ-19) ಎಂಬ ಹುಲಿಯ ಮಗಳು. 2014ರಲ್ಲಿ ಜನಿಸಿದ ಎರೋಹೆಡ್, 11 ವರ್ಷಗಳಲ್ಲಿ ನಾಲ್ಕು ಬಾರಿ 10 ಮರಿಗಳಿಗೆ ಜನ್ಮ ನೀಡಿದ್ದಳು, ಅವುಗಳಲ್ಲಿ ಆರು ಈಗಲೂ ಜೀವಂತವಿವೆ. ಆಕೆಯ ಶಕ್ತಿ, ಗಾಂಭೀರ್ಯ ಮತ್ತು ತಾಯಿಯ ಸ್ವಭಾವಕ್ಕೆ ಆಕೆಯನ್ನು ರಣಥಂಭೋರ್ನ ರಾಣಿಯೆಂದೇ ಕರೆಯಲಾಗುತ್ತಿತ್ತು.

ಇತ್ತೀಚೆಗಷ್ಟೇ, ಎರೋಹೆಡ್ ಪದಮ್ ತಲಾಬ್ನ ದಡದಲ್ಲಿ ಮೊಸಳೆಯೊಂದನ್ನು ಕೊಂದು ಬೇಟೆಯಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಘಟನೆಯು ಆಕೆಯ ಅಪಾರ ಶಕ್ತಿ ಮತ್ತು ಮಚ್ಲಿಯ “ಮೊಸಳೆಯ ಹಂತಕಿ” ಖ್ಯಾತಿಯನ್ನು ಮತ್ತೊಮ್ಮೆ ಮೆಲುಕು ಹಾಕುವಂತೆ ಮಾಡಿತ್ತು. ಆದರೆ, ಕೆಲವು ತಿಂಗಳ ಹಿಂದೆಯೇ ಎರೋಹೆಡ್ಗೆ ಮೂಳೆ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಆಕೆಯ ಆರೋಗ್ಯ ಕ್ಷೀಣಿಸುತ್ತಿದ್ದಂತೆ, ಆಕೆಯ ಮರಿಗಳು ಮಾನವರ ಸಾಮೀಪ್ಯಕ್ಕೆ ಒಗ್ಗಿಕೊಂಡು, ದಾಳಿ ಮಾಡಲು ಆರಂಭಿಸಿದ್ದವು. ಈ ಹಿನ್ನೆಲೆಯಲ್ಲಿ ಎರೋಹೆಡ್ನ ಪುತ್ರಿ ಕಾಂಕತಿಯನ್ನು ಸ್ಥಳಾಂತರಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾಂಕತಿ ಕಳೆದ ಎರಡು ತಿಂಗಳಲ್ಲಿ 7 ವರ್ಷದ ಒಬ್ಬ ಬಾಲಕ, ಅರಣ್ಯಾಧಿಕಾರಿ ಮತ್ತು ಜೈನ್ ದೇವಸ್ಥಾನದ ಕಾವಲುಗಾರನನ್ನು ದಾಳಿ ಮಾಡಿ ಕೊಂದಿದ್ದಳು ಎಂದು ಶಂಕಿಸಲಾಗಿದೆ. ಈ ಘಟನೆಗಳಿಂದಾಗಿ ರಣಥಂಭೋರ್ ಹುಲಿ ರಕ್ಷಿತಾರಣ್ಯದಲ್ಲಿ ಎರೋಹೆಡ್ಳ ಮೂರು ಮರಿಗಳನ್ನೂ ವಿವಿಧ ರಕ್ಷಿತಾರಣ್ಯಗಳಿಗೆ ಸ್ಥಳಾಂತರಿಸಲು ತೀರ್ಮಾನಿಸಲಾಯಿತು.
ಎರೋಹೆಡ್ನ ಸಾವು ರಣಥಂಭೋರ್ಗೆ ತುಂಬಲಾಗದ ನಷ್ಟವಾಗಿದೆ. ದೇಶಾದ್ಯಂತ ಫೋಟೋಗ್ರಾಫರ್ಗಳು, ವನ್ಯಜೀವಿ ಸಂರಕ್ಷಕರು ಮತ್ತು ಪ್ರವಾಸಿಗರ ಮನಸ್ಸಲ್ಲಿ ಸದಾ ಆಕೆ ಅಜರಾಮರಳಾಗಿರುತ್ತಾಳೆ ಎಂದು ಅಧಿಕಾರಿಗಳು ಹೇಳಿದ್ದಾರೆ.