ಬೆಂಗಳೂರು | ಕನ್ನಡ ಚಿತ್ರರಂಗದಲ್ಲಿ ಹೊಸ ತಲೆಮಾರಿನ ಸಿನಿಮಾ ಮೇಕರ್ಸ್ ದೊಡ್ಡ ಯೋಜನೆಗಳೊಂದಿಗೆ ದೂರದೃಷ್ಟಿಯಿಟ್ಟುಕೊಂಡು ವಿಶ್ವ ದರ್ಜೆಯ ಸಿನಿಮಾಗಳನ್ನ ಮಾಡುವತ್ತ ಚಿತ್ತ ಹರಿಸ್ತಿದ್ದಾರೆ. ಅದಕ್ಕಾಗಿ ವರ್ಷಾನುಗಟ್ಟಲ್ಲೇ ತಯಾರಿಯನ್ನೂ ನಡೆಸ್ತಿದ್ದಾರೆ. ಇದೀಗ ಅದೇ ಸಾಲಿನಲ್ಲೊಂದು ಚಿತ್ರತಂಡ, ಪ್ರಬಲ ಕ್ರಿಯಾಶೀಲ ತಂತ್ರಜ್ಞರ ತಂಡದೊಂದಿಗೆ ಪ್ಯಾನ್ ಏಷಿಯಾ ಸಿನಿಮಾ ಮಾಡೋದಕ್ಕೆ ಮುಂದಾಗಿದೆ. ಈ ಪ್ಯಾನ್ ಏಷಿಯಾ ಸಿನಿಮಾದ ನಾಯಕನಾಗಿ ಮ್ಯಾಸೀವ್ ಸ್ಟಾರ್ ನಟ ರಾಜವರ್ಧನ್ ಕಾಣಿಸಿಕೊಳ್ತಿದ್ದಾರೆ.
ಹಿರಿಯ ನಟ ಡಿಂಗ್ರಿನಾಗರಾಜ್ ಅವರ ಪುತ್ರ ರಾಜವರ್ಧನ್ ಈವರೆಗೂ ನಾಲ್ಕು ಚಿತ್ರಗಳಲ್ಲಿ ನಾಯಕ ನಟನಾಗಿ ನಟಿಸಿದ್ದು, ಎಲ್ಲವೂ ಒಂದಕ್ಕಿಂದ ಒಂದು ಭಿನ್ನ ಪ್ರಯತ್ನಗಳೇ ಆಗಿವೆ. ರಾಜವರ್ಧನ್ ಈ ಎಲ್ಲಾ ಪ್ರಾದೇಶಿಕ ಪ್ರಯೋಗಗಳ ಅನುಭವ ಮತ್ತು ದೊಡ್ಡ ಸಿನಿಮಾ ಕನಸಿನ ಹುಡುಕಾಟವೇ ಈ ಪ್ಯಾನ್ ಏಷಿಯಾ ಪ್ರಯತ್ನ.
ಅಂದ್ಹಾಗೆ ಈ ಚಿತ್ರದ ಮುಹೂರ್ತ ಈಗಾಗ್ಲೇ ನೇರವೇರಿದ್ದು, ಪುರಾತನ ಮತ್ತು ಅತ್ಯಂತ ಶಕ್ತಿಯುವ ಗಣಪತಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತಕ್ಕೆ ಚಾಲನೆ ನೀಡಿರೋದು ವಿಶೇಷ. KGF, ಕಾಂತಾರ, ಟಾಕ್ಸಿಕ್ ಜೊತೆಗೆ ಬಾಹುಬಲಿ RRR ಹೀಗೆ ದಕ್ಷಿಣ ಭಾರತ ಚಿತ್ರಗಳು ವಿಶ್ವ ಮಟ್ಟದಲ್ಲಿ ಭಾರತೀಯ ಚಿತ್ರರಂಗವನ್ನ ಮೆರೆಸ್ತಿದ್ದಾವೆ. ಭಾರತೀಯ ಚಿತ್ರರಂಗದ ಇಂದಿನ ಈ ಫಿಲಂ ಮೇಕರ್ ಗಳ ಸಿನಿಮಾ ಸಾಧನೆ ಹೊಸ ತಲೆಮಾರಿಗೆ ಸ್ಫೂರ್ತಿಯ ಚಿಲುಮೆಯಾಗಿದೆ. ಅದೇ ಹಾದಿಯಲ್ಲಿ ಮತ್ತೊಂದು ಮೈಲಿಗಲ್ಲು ನೆಡೆದೋದಕ್ಕೆ ಪಕ್ಕಾ ಹೀರೋಮೆಟೀರಿಯಲ್, ತುಂಬು ಸಿನಿಮೋತ್ಸಾಹಿ, ಬಹುಮುಖ ಪ್ರತಿಭೆ ನಟ ರಾಜವರ್ಧನ್ ರವರು ಒಂದು ತಂಡವನ್ನ ಕಟ್ಟಿಕೊಂಡಿದ್ದಾರೆ.
ಈ ತಂಡ ಸರಿಸುಮಾರು 5ವರ್ಷಗಳಿಂದ ಸತತವಾಗಿ ಈ ಪ್ಯಾನ್ ಏಷಿಯಾ ಸಿನಿಮಾಗಾಗಿ ಪೂರ್ವ ತಯಾರಿ ನಡೆಸಿದೆ. ಇದೀಗ ಅದು ಕೊನೆಯ ಹಂತ ತಲುಪಿದ್ದು, ಸದ್ಯದಲ್ಲೇ ಚಿತ್ರ ಹಾಗೂ ಚಿತ್ರತಂಡ ಸೇರಿ ಎಲ್ಲಾ ವಿಚಾರಗಳನ್ನ ಅನಾವರಣ ಮಾಡಲಾಗುತ್ತದೆ. ಅಂದ್ಹಾಗೆ ರಾಜವರ್ಧನ್ ಕಳೆದ ಒಂದುವರ್ಷ ನಟನೆಯಿಂದ ದೂರ ಉಳಿದಿದ್ದು ಇದೇ ಚಿತ್ರದ ಕಾರಣಕ್ಕೆ ಎಂದು ಹೇಳಲಾಗ್ತಿದೆ.
ರಾಜವರ್ಧನ್ ಮಾತು:
‘ಬಿಚ್ಚುಗತ್ತಿ’ ಚಿತ್ರದಿಂದ ‘ಗಜರಾಮ’ವರೆಗೂ ಮಾಡಿದ ಎಲ್ಲಾ ಸಿನಿಮಾಗಳು ಒಂದೊಂದು ಬಗೆಯಲ್ಲಿ ಪಾಠ ಹೇಳಿಕೊಟ್ಟಿವೆ. ಕಳೆದ ವರ್ಷ ನಾನು ಕ್ರಿಯೇಟೀವ್ ಹೆಡ್ ಆಗಿ, ನಿರ್ಮಾಪಕನಾಗಿ ಕೆಲಸ ಮಾಡಿದ್ದ ‘ಕಮಲ್ ಶ್ರೀದೇವಿ’ ಚಿತ್ರ ಸಿನಿಮಾದೊಳಗಿನ, ಹೊರಗಿನ ಬೇಕು-ಬೇಡ ಮತ್ತು ವ್ಯವಹಾರಿಕ ಜ್ಞಾನವನ್ನ ಕಲಿಸಿದೆ. ನಾನೂ ಮೂಲತಃ ಚಿತ್ರಕಲಾ ವಿದ್ಯಾರ್ಥಿ… ಸಿನಿಮಾದೊಳಗೆ ಕೊನೆಯವರೆಗೂ ನಾನು ವಿದ್ಯಾರ್ಥಿನೇ… ಈವರೆಗೂ ನಾನು ಮಾಡಿದ ಚಿತ್ರಗಳೆಲ್ಲವೂ ಸಿನಿಮಾ ಕೆಲಸಗಳೆಲ್ಲವೂ ಕಲಿಕೆಯೇ… ಈವರೆಗೂ ನಾನೇನು ಮಾಡಿದ್ದೇನೂ ಅದೆಲ್ಲವೂ ಅನುಭವ ಅಷ್ಟೇ… ನನ್ನ ಅಸಲಿ ಸಿನಿಮಾ ಪಯಣ ಇಲ್ಲಿಂದ ಆರಂಭ… ನನ್ನ ಸಿನಿಮಾ ಕನಸು, ದಾರಿ, ಗುರಿ ಈ ಚಿತ್ರವಾಗಲಿದೆ ಅನ್ನೋದು ನನ್ನ ಭರವಸೆ. ಹೇಳಬೇಕು ಅಂದ್ರೆ ಇದೇ ನನಗೆ ಮೊದಲ ಸಿನಿಮಾ ಅನ್ನಿಸ್ತಿದೆ. ಅಷ್ಟು ತಯಾರಿ ಆಗ್ತಿದೆ. ತುಂಬಾ ಪ್ರತಿಭಾವಂತ ವಿಶ್ವ ದರ್ಜೆಯ ಸಿನಿಮಾ ಮಾಡೋ ಸಾಮರ್ಥ್ಯದ ತಂಡ ಬೆನ್ನಿಗೆ ನಿಂತಿದೆ. ಸದ್ಯಕ್ಕೆ ಇಷ್ಟು ಮಾತ್ರ ಹೇಳಬಲ್ಲೇ.. ಉಳಿದ ವಿಷ್ಯಯಗಳು ಒಂದೊಂದಾಗಿ ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ.
ಇದನ್ನೂ ಓದಿ : ಚುನಾವಣಾ ಆಯೋಗದ ಪತ್ರದಲ್ಲಿ ಬಿಜೆಪಿ ಸೀಲು.. ಕೇರಳದಲ್ಲಿ ರಾಜಕೀಯ ಸಂಚಲನ, ಅಧಿಕಾರಿ ಅಮಾನತು!



















