ಜೈಪುರ: ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭೀಕರ ಉಗ್ರರ ದಾಳಿಯ ಬಳಿಕ ದೇಶಾದ್ಯಂತ ಕಟ್ಟೆಯೊಡೆದಿರುವ ಆಕ್ರೋಶ ಇನ್ನೂ ತಣ್ಣಗಾಗಿಲ್ಲ. ಇದರ ಬೆನ್ನಲ್ಲೇ, ಪಾಕಿಸ್ತಾನಕ್ಕೆ ಭಾರತದ ಕುರಿತು ರಹಸ್ಯ ಮಾಹಿತಿ ರವಾನಿಸಿದ ಆರೋಪದಲ್ಲಿ ಪಠಾಣ್ ಖಾನ್ ಎಂಬಾತನನ್ನು ರಾಜಸ್ಥಾನ ಗುಪ್ತಚರ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
ಪಠಾಣ್ ಖಾನ್ 2013ರಲ್ಲಿಯೇ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ. ಈತನು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಅಧಿಕಾರಿಗಳನ್ನು ಭೇಟಿಯಾಗಿ ಬಂದಿದ್ದ. ಇದಾದ ಬಳಿಕ ಭಾರತಕ್ಕೆ ಸಂಬಂಧಿಸಿದ ವಿಚಾರಗಳನ್ನು ಐಎಸ್ಐ ಜತೆ ಹಂಚಿಕೊಳ್ಳುತ್ತಿದ್ದ. ಇದರ ಕುರಿತು ಮಾಹಿತಿ ಪಡೆದ ರಾಜಸ್ಥಾನ ಗುಪ್ತಚರ ಇಲಾಖೆ ಅಧಿಕಾರಿಗಳು ಆರೋಪಿಯನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.
ಪಠಾಣ್ ಖಾನ್ ನನ್ನು ಬಂಧಿಸಿರುವ ಅಧಿಕಾರಿಗಳು ಆತನ ವಿರುದ್ಧ ಅಫೀಶಿಯಲ್ ಸೀಕ್ರೆಟ್ಸ್ ಆ್ಯಕ್ಟ್ 1923ರ ಅನ್ವಯ ಕೇಸ್ ದಾಖಲಿಸಿದ್ದಾರೆ. ಪಾಕಿಸ್ತಾನಕ್ಕೆ ಪಠಾಣ್ ಖಾನ್ ಭೇಟಿ ನೀಡಿದ ವೇಳೆಯೇ ಆತನಿಗೆ ಬೇಹುಗಾರಿಕೆ ಕುರಿತು ತರಬೇತಿ ನೀಡಲಾಗಿತ್ತು. ಭಾರತಕ್ಕೆ ಬಂದ ಬಳಿಕ ಆತನು ನಿರಂತರವಾಗಿ ಪಾಕ್ ಅಧಿಕಾರಿಗಳ ಜತೆ ನಂಟು ಹೊಂದಿದ್ದ ಎನ್ನಲಾಗಿದೆ.
ರಾಜಸ್ಥಾನದ ಜೈಸಲ್ಮೇರ್ ಅಂತಾರಾಷ್ಟ್ರೀಯ ಗಡಿಯ ಕುರಿತು ರಹಸ್ಯ ಮಾಹಿತಿಯನ್ನು ಸಂಗ್ರಹಿಸುತ್ತಿದ್ದ ಪಠಾಣ್ ಖಾನ್, ಇದನ್ನು ಪಾಕಿಸ್ತಾನದ ಅಧಿಕಾರಿಗಳ ಜತೆ ಹಂಚಿಕೊಳ್ಳುತ್ತಿದ್ದ. ಇದಕ್ಕಾಗಿ ಈತನಿಗೆ ಪಾಕಿಸ್ತಾನದ ಅಧಿಕಾರಿಗಳಿಂದ ಹಣ ರವಾನೆಯಾಗುತ್ತಿತ್ತು ಎಂದು ಮೂಲಗಳು ತಿಳಿಸಿವೆ. ಪಹಲ್ಗಾಮ್ ದಾಳಿ ವಿಚಾರದಲ್ಲಿ ಉಗ್ರರಿಗೆ ಸ್ಥಳೀಯರ ನೆರವು ಸಿಕ್ಕಿರುವ ಕುರಿತು ಶಂಕೆ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ, ಪಾಕಿಸ್ತಾನದ ಜತೆ ರಾಜಸ್ಥಾನದ ವ್ಯಕ್ತಿ ನಂಟು ಹೊಂದಿರುವುದು, ರಹಸ್ಯ ವಿಚಾರಗಳನ್ನು ಹಂಚಿಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.