ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದು ಬೆಳ್ಳಂಬೆಳಗ್ಗೆ ಜಿಟಿಜಿಟಿ ಮಳೆ ಆರಂಭವಾಗಿದೆ. ನಗರದ ಹಲವೆಡೆ ಶೀತ ಗಾಳಿ ಜೊತೆ ಮಳೆ ಆರಂಭವಾಗಿದ್ದು, ನಗರಾದ್ಯಂತ ಮೋಡ ಕವಿದ ವಾತಾವರಣವಿದೆ.

ದೀಪಾವಳಿ ಹಬ್ಬದ ಸಂಭ್ರಮದಲ್ಲಿರುವವರಿಗೆ ಮಳೆ ಸಾಥ್ ಕೊಟ್ಟಿದ್ದು, ಇಂದು ರಾಜ್ಯದ 7 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. 13 ಜಿಲ್ಲೆಗಳಿಗೆ ಹವಾಮಾನ ಇಲಾಖೆ ಭಾರೀ ಮಳೆ ಅಲರ್ಟ್ ನೀಡಿದ್ದು, ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ.

ಇನ್ನು ಜಿಟಿಜಿಟಿ ಮಳೆಗೆ ಬೆಂಗಳೂರು ಮಲೆನಾಡಿನಂತೆ ಆಗಿದೆ. ಬೆಳ್ಳಗೆಯಿಂದಲೂ ತುಂತುರು ಮಳೆ ಬಿಟ್ಟುಬಿಡದೇ ಸುರಿಯುತ್ತಿದೆ. ಚುಮುಚುಮು ಚಳಿ ಹಾಗೂ ಜಿಟಿಜಿಟಿ ಮಳೆಯೊಂದಿಗೆ ಊಟಿ ವಾತಾವರಣ ನಿರ್ಮಾಣವಾಗಿದೆ. ಇನ್ನೂ ಮುಂದಿನ ಮೂರು ದಿನಗಳವರೆಗೆ ಇದೇ ವಾತವರಣ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ನಗರದ ಗರಿಷ್ಠ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ ಎಂದು ಇಲಾಖೆ ತಿಳಿಸಿದೆ.



















