ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಕಾಲಿಕ ಮಳೆಯಾಗುತ್ತಿದ್ದು, ಹಲವೆಡೆ ಜನ- ಜೀವನ ಅಸ್ತವ್ಯಸ್ಥಗೊಂಡಿದೆ. ಹಲವೆಡೆ ಬೆಳೆಗಳು ನೆಲ ಕಚ್ಚಿವೆ. ಈ ಅಕಾಲಿಕ ಮಳೆ ರೈತರಿಗೆ ಭಾರೀ ನಷ್ಟ ಸೃಷ್ಟಿಸುತ್ತಿದೆ.
ಕೊಡಗು ಜಿಲ್ಲೆಯ ಹಲವೆಡೆ ವ್ಯಾಪಕ ಮಳೆಯಾಗಿ ಸಾಕಷ್ಟು ಅವಾಂತರ ಸೃಷ್ಟಿಸಿದೆ. ಸೋಮವಾರಪೇಟೆ ತಾಲ್ಲೂಕಿನ ಮಾಳಗದ್ದೆ ಗ್ರಾಮದಲ್ಲಿ ಭಾರೀ ಮಳೆಯಾಗಿದ್ದು, ಸಿಡಿಲಿನ ಹೊಡೆತಕ್ಕೆ ಮನೆ ಹಾಗೂ ಮನೆಯ ಗೃಹೋಪಯೋಗಿ ವಸ್ತುಗಳು ಹಾನಿಯಾಗಿವೆ. ಹಲವೆಡೆ ಆಲಿಕಲ್ಲು ಮಳೆಯಾಗಿದೆ.
ಬೀದರ್ ನ ಹಲೆವೆಡ ಭಾರೀ ಮಳೆಯಾಗಿದೆ. ಹಲವೆಡೆ ಜನ- ಜೀವನ ಅಸ್ತವ್ಯಸ್ಥವಾಗಿದೆ. ಔರಾದ, ಭಾಲ್ಕಿ, ಹುಮ್ನಾಬಾದ್, ಬಸವಕಲ್ಯಾಣ ಸೇರಿದಂತೆ ಬಹುತೇಕ ಕಡೆ ಗುಡುಗು ಸಿಡಿಲಿನ ಮಳೆಯಾಗಿದೆ. ಬಿರು ಬಿಸಿಲಿನಿಂದ ಕಂಗೆಟ್ಟಿದ್ದ ಕಲಬುರಗಿ ಜಿಲ್ಲೆಯ ಜನರಿಗೆ ಮಳೆರಾಯ ತಂಪು ಎರೆದಿದ್ದಾನೆ. ಜಿಲ್ಲೆಯಾದ್ಯಂತ ಬಿರುಗಾಳಿ ಸಹಿತ ಅಕಾಲಿಕ ಮಳೆಯಾಗಿದೆ. ತೋಟಗಾರಿಕೆ ಬೆಳೆಗಳು ನೆಲಕಚ್ಚಿವೆ. ನೀಲೂರು ಗ್ರಾಮದಲ್ಲಿ 7 ಎಕರೆ ಪಪ್ಪಾಯಿ ಬೆಳೆ ಸಂಪೂರ್ಣ ಹಾನಿಯಾಗಿದೆ.
ಕೊಪ್ಪಳ ಜಿಲ್ಲೆಯಾದ್ಯಂತ ಕೂಡ ಮಳೆಯಾಗಿದೆ. ಹಲವೆಡೆ ಆಲಿಕಲ್ಲು ಮಳೆಯಾಗಿದೆ. ಸಿಡಿಲು ಬಡಿದು ತೆಂಗಿನಮರ ಹೊತ್ತಿ ಊರಿದಿದೆ. ಏಕಾಏಕಿ ಸುರಿದ ಭಾರೀ ಮಳೆಯಿಂದ ಭತ್ತದ ರಾಶಿ ಮಾಡಿದ್ದ ರೈತರು ಕಂಗಾಲಾಗಿದ್ದಾರೆ.