ಮಂಡ್ಯ : ಬುಧವಾರ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ಹಲವೆಡೆ ಜನ – ಜೀವನ ಸಂಪೂರ್ಣವಾಗಿ ಅಸ್ತವ್ಯಸ್ಥಗೊಂಡಿದೆ.
ಜಿಲ್ಲೆ ಕೆಆರ್ ಪೇಟೆ ಸಾರಿಗೆ ಬಸ್ ನಿಲ್ದಾಣಕ್ಕೆ ಮಳೆಯ ನೀರು ಹೊಕ್ಕು ಅವಾಂತರವೇ ಸೃಷ್ಟಿಯಾಗಿದೆ. ಅಲ್ಲದೇ, ಮನೆ, ಅಂಗಡಿ, ಹೋಟೆಲ್, ಮಳಿಗೆಗಳಿಗೆ ನೀರು ನುಗ್ಗಿ ಜನರು ಪರದಾಡುವಂತಾಗಿತ್ತು. ಬಸ್ ನಿಲ್ದಾಣದ ಪಾರ್ಕಿಂಗ್ ನಲ್ಲಿದ್ದ 20ಕ್ಕೂ ಹೆಚ್ಚು ಬೈಕ್ ಮುಳುಗಡೆಯಾಗಿದ್ದವು. ಮಳೆಯ ನೀರಿಗೆ ಸಿಲುಕಿದ್ದ ಐವರು ಪ್ರಯಾಣಿಕರನ್ನು ದೋಣಿಯ ಮೂಲಕ ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿ ಕರೆ ತಂದಿದ್ದಾರೆ.
ಮತ್ತೊಂದೆಡೆ ಚರಂಡಿ ನೀರು ಮನೆಗೆ ನುಗ್ಗಿ ನೀರು ಹೊರಗೆ ಹಾಕಲು ನಿವಾಸಿಗಳು ಪರದಾಡಿ ರಾತ್ರಿಯಿಡೀ ಜಾಗರಣೆ ಮಾಡಿದ್ದಾರೆ. ಇಂತಹ ಘಟನೆಗಳು ನಡೆದಿರುವುದು ಇದೇ ಮೊದಲಲ್ಲ ಹಲವು ಬಾರಿ ಇಂತಹ ಘಟನೆಗಳು ಮರುಕಳಿಸಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.