ರಾಯಚೂರು: ರಾಹುಗ್ರಸ್ತ ರಕ್ತಚಂದ್ರಗ್ರಹಣ ಹಿನ್ನೆಲೆಯಲ್ಲಿ ಇಂದು ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ನಿತ್ಯ ಪೂಜೆ ಉತ್ಸವಗಳಲ್ಲಿ ಬದಲಾವಣೆ ಮಾಡಿಕೊಳ್ಳಲಾಗಿದೆ.
ರಾಯರ ಮಠದಲ್ಲಿ ಮಧ್ಯಾಹ್ನದಿಂದ ತೀರ್ಥ, ಪ್ರಸಾದ ಬಂದ್ ಆಗಲಿದ್ದು, ಎಂದಿನಂತೆ ರಾಯರ ವೃಂದಾವನ ದರ್ಶನಕ್ಕೆ ಭಕ್ತರಿಗೆ ಅವಕಾಶ ಇರಲಿದೆ. ಮಧ್ಯಾಹ್ನ 12:30ಕ್ಕೆ ಎಲ್ಲ ಪೂಜೆ, ಉತ್ಸವ, ಸೇವೆಗಳು, ಸಂಸ್ಥಾನ ಪೂಜೆ, ಪಾದ ಪೂಜೆ, ಪ್ರಸಾದ ಮುಕ್ತಾಯಗೊಳ್ಳಲಿದೆ. ರಾತ್ರಿ ವೇಳೆ ನಡೆಯುವ ಸೇವೆ ಉತ್ಸವಗಳು ಹಗಲಿನಲ್ಲೇ ಜರುಗಲಿವೆ.
ಪ್ರಾಂಗಣದಲ್ಲಿ ನಡೆಯುವ ವಿವಿಧ ರಥೋತ್ಸವ, ಪಲ್ಲಕ್ಕಿ ಸೇವೆ, ತೊಟ್ಟಿಲು ಸೇವೆ ಬೆಳಿಗ್ಗೆಯಿಂದಲೇ ಆರಂಭವಾಗಿದ್ದು, ಗ್ರಹಣ ಕಾಲದಲ್ಲಿ ಮಠದಲ್ಲಿ ಗ್ರಹಣ ಶಾಂತಿ ಹೋಮ ನಡೆಯಲಿದೆ. ಗ್ರಹಣ ಮುಕ್ತಾಯ ಬಳಿಕ ರಾಯರ ವೃಂದಾವನಕ್ಕೆ ಜಲಾಭಿಷೇಕ ಮಾಡಲಾಗುತ್ತದೆ.