ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಡೆಂಗ್ಯೂ (Dengue) ಮಹಾಮಾರಿಯ ಅಬ್ಬರ ಜೋರಾಗುತ್ತಿದೆ. ಪ್ರತಿನಿತ್ಯ ಮೂರ್ನಾಲ್ಕು ಸಾವು ಆಗುತ್ತಿದೆ. ಸರ್ಕಾರ ಮಾತ್ರ ಇನ್ನೂ ಸರಿಯಾದ ಮುಂಜಾಗ್ರತಾ ಕ್ರಮ ಕೈಗೊಳ್ಳದೇ ಬರೀ ಸಭೆ ಅಂತಾ ಸಮಯ ಕಳೆಯುತ್ತಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ (R.Ashok) ಸರ್ಕಾರದ ವಿರುದ್ಧ ಗುಡುಗಿದ್ದಾರೆ.
ಭಾನುವಾರ ಜಯನಗರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಡೆಂಗ್ಯೂ ರೋಗಿಗಳ ಆರೋಗ್ಯ ವಿಚಾರಿಸಿದ ಅವರು, “ಸರ್ಕಾರ ಕೂಡಲೇ ಮೆಡಿಕಲ್ ಎಮರ್ಜೆನ್ಸಿ ಘೋಷಣೆ ಮಾಡಬೇಕು. ಡೆಂಗ್ಯೂ ಟೆಸ್ಟಿಂಗ್ ನಿಂದ ಸಂಪೂರ್ಣ ಚಿಕಿತ್ಸೆಯ ಹೊಣೆ ಹೊರಬೇಕು. ಎಲ್ಲರಿಗೂ ಉಚಿತ ಚಿಕಿತ್ಸೆ ನೀಡಬೇಕು. ಜನರ ಪ್ರಾಣದ ರಕ್ಷಣೆಗೆ ಸರ್ಕಾರ ಹಣ ಬಿಡುಗಡೆ ಮಾಡಿ. ಎಲ್ಲ ಆಸ್ಪತ್ರೆಯಲ್ಲೂ ಕೊರೊನಾ ಮಾದರಿಯಲ್ಲಿ ಡೆಂಗ್ಯೂಗಾಗಿ ಬೆಡ್ಗಳ ವ್ಯವಸ್ಥೆ ಮಾಡಿಸಬೇಕು” ಎಂದು ಆಗ್ರಹ ಪಡಿಸಿದ್ದಾರೆ.
“ಸರ್ಕಾರವನ್ನ ಎಚ್ಚರಿಸುವ ಕೆಲಸ ವಿರೋಧ ಪಕ್ಷದ ನಾಯಕನಾಗಿ ಮಾಡಿದ್ದೇನೆ. ಈ ಸರ್ಕಾರವನ್ನ ಎಚ್ಚರಿಸದೇ ಹೋದರೆ ಯಾವ ಕೆಲಸವನ್ನೂ ಮಾಡೋದಿಲ್ಲ. ನಾಳೆಯಿಂದ ಇಡೀ ರಾಜ್ಯಾದ್ಯಂತ ನಮ್ಮ ಪಕ್ಷದ ನಾಯಕರು, ಶಾಸಕರು ಆಸ್ಪತ್ರೆಗಳಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಬಗ್ಗೆ ನಿಗಾ ವಹಿಲಿದ್ದಾರೆ” ಎಂದು ತಿಳಿಸಿದ್ದಾರೆ.
“ನಾನು ಈ ಹಿಂದೆ ಆರೋಗ್ಯ ಸಚಿವನಾಗಿ ಕೆಲಸ ಮಾಡಿದ್ದೆ. ನಾನು ಸರ್ಕಾರಕ್ಕೆ ಆಗ್ರಹ ಮಾಡ್ತೀನಿ. ಈ ಕೂಡಲೇ ‘ಡೆಂಗ್ಯೂ ಪರೀಕ್ಷೆ’ಯನ್ನ ಉಚಿತವಾಗಿ ಮಾಡುವಂತೆ ಆದೇಶ ಮಾಡಿ. ಜನ ಟೆಸ್ಟ್ ಮಾಡಿಸಿಕೊಳ್ಳದೇ ಇರುವುದರಿಂದ ಡೆಂಗ್ಯೂ ಹೆಚ್ಚಾಗುತ್ತಿದೆ. ನಮ್ಮ ಸರ್ಕಾರದ ಸಮಯದಲ್ಲಿ ಹೇಗೆ ಕೊರೊನಾ ಟೆಸ್ಟ್ ಉಚಿತ ಮಾಡಿದ್ವಿ? ಆ ರೀತಿ ಡೆಂಗ್ಯೂಗೆ ಟೆಸ್ಟಿಂಗ್ ಮಾಡಿಸಿ. ಅದಕ್ಕೂ ಆಮೇಲೆ ಟ್ಯಾಕ್ಸ್ ಹಾಕಬೇಡಿ. ಡೆಂಗ್ಯೂ ಟೆಸ್ಟಿಂಗ್ಗೆ ಚಿಕಿತ್ಸೆಗೆ 10 ಕೋಟಿ ಆಗಬಹುದಾ? ಅದಕ್ಕೆ ಖರ್ಚು ಮಾಡಿ. ಸರ್ಕಾರವೇ ಜನರಿಗೆ ಅಭಯ ನೀಡಬೇಕು. ಕೋವಿಡ್ ಮಾದರಿಯಲ್ಲಿ ಡೆಂಗ್ಯೂಗೆ ಪ್ರತ್ಯೇಕ ವಾರ್ಡ್ ಮಾಡಿಸಿ. ಅಧಿಕಾರಿಗಳು ಎಸಿ ರೂಮ್ನಿಂದ ಹೊರಬಂದು ಕೆಲಸ ಮಾಡಬೇಕು. ನಗರದಲ್ಲಿ ಸ್ವಚ್ಛತೆ ಇಲ್ಲದಂತೆ ಆಗಿದೆ. ಸ್ವಚ್ಛತೆ ಕಾಪಾಡಿಕೊಳ್ಳುವುದಕ್ಕೆ ಮುಂದಾಗಬೇಕು. ಉಚಿತ ಟೆಸ್ಟಿಂಗ್, ಚಿಕಿತ್ಸೆ ಮತ್ತು ಔಷಧವನ್ನ ನೀಡಿ. ಇಲ್ಲೇ 14 ರೋಗಿಗಳಿದ್ದು, 4 ಮಕ್ಕಳಿದ್ದಾರೆ. ಮಕ್ಕಳಿಗೂ ಡೆಂಗ್ಯೂ ಹಬ್ಬುತ್ತಿದೆ. ಇದನ್ನ ಸರ್ಕಾರ ಗಮನಿಸಬೇಕು. ವಿರೋಧ ಪಕ್ಷದ ನಾಯಕನಾಗಿ ನಾನು ಸರ್ಕಾರವನ್ನ ಎಚ್ಚರಿಸೋ ಕೆಲಸ ಮಾಡ್ತಿದ್ದೇನೆ. ಈ ಸರ್ಕಾರಕ್ಕೆ ವಿರೋಧ ಪಕ್ಷ ಎಚ್ಚರಿಸಿದ್ರೇ ಮಾತ್ರ ಕೆಲಸ ಮಾಡೋದು. ನಮ್ಮ ರಾಜ್ಯಾಧ್ಯಕ್ಷರು ಸೇರಿದಂತೆ ಉಳಿದ ನಾಯಕರು ಸಹ ನಾಳೆಯಿಂದ ಆಸ್ಪತ್ರೆಗಳಿಗೆ ಭೇಟಿ ನೀಡಲಿದ್ದಾರೆ. ಇದರಿಂದ ಆಸ್ಪತ್ರೆಯವರು ಸಹ ಆಕ್ಟೀವ್ ಆಗ್ತಾರೆ” ಎಂದು ಹೇಳಿದ್ದಾರೆ.
“ಡೆಂಗ್ಯೂ ಎಮರ್ಜೆನ್ಸಿ ಅಂತಾ ಸರ್ಕಾರ ಘೋಷಣೆ ಮಾಡಲಿ. ಜನರ ರಕ್ಷಣೆ ಮಾಡಿ, ರಾಜ್ಯದಲ್ಲಿ ಝಿಕಾ ವೈರಸ್ನಿಂದ ಒಬ್ಬರು ಮೃತಪಟ್ಟಿದ್ದಾರೆ. ಕಾಲಾರದಿಂದ ಸಹ ಜನ ಸಾಯ್ತಿದ್ದಾರೆ. ಈಗ ಡೆಂಗ್ಯೂ ಸಹ ಹೆಚ್ಚಾಗಿದೆ. ಸರ್ಕಾರ ಎಚ್ಚೆತ್ತುಕೊಳ್ಳಬೇಕು” ಎಂದಿದ್ದಾರೆ.
“ಸರ್ಕಾರ ಮೀಟಿಂಗ್ ಮೇಲೆ ಮೀಟಿಂಗ್ ಮಾಡ್ತಿದೆ. ಸಭೆ ಮಾಡುವುದರಿಂದ ನಿಯಂತ್ರಣಕ್ಕೆ ಬರುವುದಿಲ್ಲ. ಸರ್ಕಾರ ಯಾವುದಕ್ಕೆ ಎಷ್ಟು ಹಣ ಬಿಡುಗಡೆ ಮಾಡಿದ್ದೇವೆ ಅಂತಾ ಹೇಳಿ. ಆರ್ಥಿಕವಾಗಿ ಸರ್ಕಾರ ಯಾವ ರೀತಿಯಲ್ಲಿ ಡೆಂಗ್ಯೂ ತಡೆಯಲು ಹಣ ಬಿಡುಗಡೆ ಮಾಡಿದೆ ಅನ್ನೋದನ್ನ ಹೇಳಬೇಕು. ಅದು ಬಿಟ್ಟು, ಬರೀ ಸಭೆ ಮಾಡಿದ್ರೆ? ಕಾಫಿ, ಟೀ ದೋಸೆಗೆ ಸೀಮಿತವಾಗುತ್ತೆ” ಎಂದು ಟೀಕಿಸಿದ್ದಾರೆ.